ರಾಹುಲ್ ಗಾಂಧಿಗೆ ವಯನಾಡುವಿನೊಂದಿಗೆ ಭಾವನಾತ್ಮಕ ಸಂಬಂಧವಿದೆ: ಅದೇನು ಗೊತ್ತೇ ?
ವಯನಾಡು, ಎ.4: ವಯನಾಡು ಕ್ಷೇತ್ರದಿಂದ ಯುಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಾಂಗ್ರೆಸ್ ಅಧ್ಯಕ್ ರಾಹುಲ್ ಗಾಂಧಿ ಅವರಿಗೆ ವಯನಾಡುವಿನೊಂದಿಗೆ ಭಾವನಾತ್ಮಕ ಸಂಬಂಧವಿದೆ. 28 ವರ್ಷಗಳ ಹಿಂದೆ ರಾಹುಲ್ ಗಾಂಧಿ ತಂದೆ ದಿವಂಗತ ರಾಜೀವ್ ಗಾಂಧಿ ಚಿತಾಭಸ್ಮವನ್ನು ಇದೇ ವಯನಾಡುವಿನ ಪಾಪನಾಶಿನಿಯಲ್ಲಿ ವಿಸರ್ಜನೆ ಮಾಡಲಾಗಿತ್ತು
1991, ಮೇ 21ರಂದು ರಾಜೀವ್ ಗಾಂಧಿ ಅವರು ತಮಿಳುನಾಡಿನ ಶ್ರಿಪೆರುಂಬದೂರ್ ನಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಎಲ್ ಟಿಟಿಯ ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾಗಿದ್ದರು.
“ ರಾಜೀವ್ ಗಾಂಧಿ ಪಾರ್ಥಿವ ಶರೀರದ ಚಿತಾಭಸ್ಮವನ್ನು ತಿರುನೆಲ್ಲಿ ಗ್ರಾಮದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನ ಪಕ್ಕದಲ್ಲಿ ಹರಿಯುವ ಪಾಪನಾಶಿನಿ ಹೊಳೆಯಲ್ಲಿ ವಿಸರ್ಜನೆ ಮಾಡಲಾಗಿತ್ತು. ಈ ವೇಳೆ ತಾನು, ಅಂದಿನ ಕೇರಳದ ಮುಖ್ಯ ಮಂತ್ರಿ ಕೆ. ಕರುಣಾಕರನ್, ಮುಲ್ಲಪಳ್ಳಿ ರಾಮಚಂದ್ರನ್ ಉಪಸ್ಥಿತರಿದ್ದೆವು’’ ಎಂಬ ವಿಚಾರವನ್ನು ವಿಧಾನಸಭೆಯ ವಿಪಕ್ಷ ನಾಯಕ ರಮೇಶ್ ಚೆನ್ನಿತಲಾ ತಿಳಿಸಿದ್ದಾರೆ.
ಪಾಪನಾಶಿನಿಯಲ್ಲಿ ಚಿತಾಭಸ್ಮವನ್ನು ಮುಳುಗಿಸುವುದು ಗಯಾದ ಪುಣ್ಯಕ್ಷೇತ್ರದಲ್ಲಿ ಕೈಗೊಳ್ಳುವ ವಿಧಿವಿಧಾನಗಳಿಗೆ ಸಮಾನವೆಂದು ನಂಬಲಾಗಿದೆ. ಇದೇ ಕಾರಣಕ್ಕಾಗಿ ರಾಜೀವ್ ಗಾಂಧಿ ಚಿತಾಭಸ್ಮವನ್ನು ಪಾಪನಾಶಿನಿಯಲ್ಲಿ ವಿಸರ್ಜಿಸಲಾಗಿತ್ತು.
ರಾಹುಲ್ ಗಾಂಧಿ ಮುಂದೆ ಚುನಾವಣಾ ಪ್ರಚಾರ ಕೈಗೊಳ್ಳುವ ಸಂದರ್ಭದಲ್ಲಿ ಪಾಪನಾಶಿನಿಯ ಶ್ರೀ ಮಹಾವಿಷ್ಣು ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.