ರಾಜಕೀಯ ವಿರೋಧಿಗಳನ್ನು ‘ದೇಶವಿರೋಧಿಗಳು' ಎನ್ನಬೇಡಿ: ಬ್ಲಾಗ್ ನಲ್ಲಿ ಅಡ್ವಾಣಿ
ಕೊನೆಗೂ ಮೌನಮುರಿದ ಬಿಜೆಪಿಯ ಹಿರಿಯ ನಾಯಕ
ಹೊಸದಿಲ್ಲಿ, ಎ.4: ಗಾಂಧಿನಗರದಿಂದ ಬಿಜೆಪಿಯು ಅಮಿತ್ ಶಾ ಅವರನ್ನು ಕಣಕ್ಕಿಳಿಸಿದ ನಂತರ ಮೊದಲ ಬಾರಿಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಬ್ಲಾಗ್ ಒಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಐದು ವರ್ಷಗಳಲ್ಲಿ ಮೊದಲ ಬಾರಿಗೆ ಬ್ಲಾಗ್ ಬರೆದಿರುವ ಅವರು ತಾನು ‘ದೇಶ ಮೊದಲು, ಪಕ್ಷ ನಂತರ, ತಾನು ಕೊನೆಗೆ” ಎನ್ನುವುದನ್ನು ನಂಬಿದವನಾಗಿದ್ದೇನೆ ಎಂದಿದ್ದಾರೆ.
ಅಡ್ವಾಣಿ ಬ್ಲಾಗ್ ನ ಮುಖ್ಯಾಂಶಗಳು
►ಎಪ್ರಿಲ್ 6ರಂದು ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಇದು ಹಿಂತಿರುಗಿ ನೋಡಲು, ಮುಂದೆ ನೋಡಲು ಮತ್ತು ನಮ್ಮೊಳಗೆ ನೋಡಲು ಇದು ಉತ್ತಮ ಸಂದರ್ಭವಾಗಿದೆ.
►1991ರಿಂದ ನನ್ನನ್ನು ಲೋಕಸಭೆಗೆ 6 ಬಾರಿ ಆಯ್ಕೆ ಮಾಡಿದ ಗಾಂಧಿನಗರದ ಜನತೆಗೆ ನಾನು ಆಭಾರಿಯಾಗಿದ್ದೇನೆ. 14ನೆ ವಯಸ್ಸಿನಲ್ಲಿ ಆರೆಸ್ಸೆಸ್ ಗೆ ಸೇರಿದಂದಿನಿಂದಲೇ ತಾಯ್ನಾಡಿಗಾಗಿ ಸೇವೆ ಸಲ್ಲಿಸುವುದು ನನ್ನ ಉದ್ದೇಶ ಮತ್ತು ಬಯಕೆಯಾಗಿತ್ತು. ‘ದೇಶ ಮೊದಲು, ಪಕ್ಷ ನಂತರ, ತಾನು ಕೊನೆಗೆ’ ಎನ್ನುವ ತತ್ವವನ್ನೇ ನಾನು ನಂಬಿದ್ದೇನೆ.
►ವೈವಿಧ್ಯತೆಗೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ನೀಡುವುದೇ ಭಾರತೀಯ ಪ್ರಜಾಪ್ರಭುತ್ವದ ಸಾರವಾಗಿದೆ. ನಮ್ಮನ್ನು ರಾಜಕೀಯವಾಗಿ ಒಪ್ಪದವರನ್ನು ಬಿಜೆಪಿ ಆರಂಭದಿಂದಲೂ ಎಂದಿಗೂ ‘ಶತ್ರುಗಳು’ ಎಂದು ಪರಿಗಣಿಸಿಲ್ಲ, ಆದರೆ ಕೇವಲ ನಮ್ಮ ಎದುರಾಳಿಗಳು ಎಂದಷ್ಟೇ ಪರಿಗಣಿಸಿದ್ದೆವು. ಅದೇ ರೀತಿ, ನಮ್ಮ ರಾಷ್ಟ್ರೀಯತೆಯ ಕಲ್ಪನೆಯಲ್ಲಿ ನಮ್ಮನ್ನು ರಾಜಕೀಯವಾಗಿ ವಿರೋಧಿಸುವವರನ್ನು ‘ದೇಶವಿರೋಧಿಗಳು’ ಎಂದು ಪರಿಗಣಿಸಿಲ್ಲ.