ಸುರೇಶ್ ಗೋಪಿಯಿಂದ ನೀತಿ ಸಂಹಿತೆ ಉಲ್ಲಂಘನೆ: ಮೇಲ್ನೋಟಕ್ಕೆ ಸಾಬೀತು
ತಿರುವನಂತಪುರ, ಎ. 7: ಚಿತ್ರ ನಟ ಹಾಗೂ ತ್ರಿಶೂರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಚುನಾವಣಾ ಅಧಿಕಾರಿಯಾಗಿರುವ ತ್ರಿಶೂರ್ ಜಿಲ್ಲಾಧಿಕಾರಿ ಟಿ.ವಿ. ಅನುಪಮಾ ಕೇರಳದ ಮುಖ್ಯ ಚುನಾವಣಾ ಅಧಿಕಾರಿ, ಸಿಇಒ ಟೀಕಾ ರಾಮ್ ಮೀನಾ ಅವರಿಗೆ ಈ ಬಗ್ಗೆ ವರದಿ ಸಲ್ಲಿಸಿದ್ದರು. ಮತದಾರರಿಂದ ಮತ ಪಡೆಯಲು ಧಾರ್ಮಿಕತೆಯನ್ನು ಬಳಸುವ ಮೂಲಕ ಸುರೇಶ್ ಗೋಪಿ ಅವರು ಮಾದರಿ ನೀತಿ ಸಂಹಿತೆಯನ್ನು ಮೇಲ್ನೋಟಕ್ಕೆ ಉಲ್ಲಂಘಿಸಿರುವುದು ಕಂಡು ಬಂದಿದೆ ಎಂದು ಅನುಪಮಾ ಹೇಳಿದ್ದಾರೆ.
‘‘ನಾನು ಜಿಲ್ಲಾಧಿಕಾರಿಯಿಂದ ವರದಿ ಸ್ವೀಕರಿಸಿದ್ದೇನೆ. ಇದರಲ್ಲಿ ಅಭ್ಯರ್ಥಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ’’ ಎಂದು ಮೀನಾ ಹೇಳಿದ್ದಾರೆ.
ಅನುಪಮಾ ಅವರು ಸುರೇಶ್ ಗೋಪಿ ಅವರ ಪ್ರತಿಕ್ರಿಯೆ ಕೋರಿದ್ದಾರೆ. ಚುನಾವಣಾ ಅಧಿಕಾರಿಯ ಕ್ರಮದ ವಿರುದ್ಧ ಅಭ್ಯರ್ಥಿ ಸಿಇಒ ಅಥವಾ ಭಾರತದ ಚುನಾವಣಾ ಆಯೋಗಕ್ಕೆ ನೇರವಾಗಿ ಮೇಲ್ಮನವಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.