ನನ್ನ ಮೇಲಿನ ಕಪಾಳಮೋಕ್ಷದ ಹಿಂದೆ ಬಿಜೆಪಿ ಕೈವಾಡ: ಕೇಜ್ರಿವಾಲ್
ಹೊಸದಿಲ್ಲಿ, ಮೇ 5: ನನ್ನ ಮೇಲೆ ಶನಿವಾರ ವ್ಯಕ್ತಿಯೊಬ್ಬ ದಾಳಿ ನಡೆಸಿರುವ ಹಿಂದೆ ಬಿಜೆಪಿ ಕೈವಾಡವಿದೆ. ಪದೇ ಪದೇ ನನ್ನ ಮೇಲೆ ನಡೆಯುತ್ತಿರುವ ದಾಳಿ ಹಾಗೂ ಭದ್ರತೆಯ ವೈಫಲ್ಯವು ಇದಕ್ಕೆ ಪುಷ್ಠಿ ನೀಡುತ್ತಿದೆ. ಬಿಜೆಪಿ, ಆಮ್ ಆದ್ಮಿ ಪಕ್ಷದ ಸರಕಾರವನ್ನು ಮುಗಿಸಲು ಯತ್ನಿಸುತ್ತಿದೆ. ಎಲ್ಲ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
‘‘ನನಗೆ ಸುರಕ್ಷತೆ ನೀಡುವ ಜವಾಬ್ದಾರಿ ಬಿಜೆಪಿಗೆ ಸೇರಿದ್ದು. ಒಂದಲ್ಲ ಮೂರು ಬಾರಿ ಭದ್ರತಾ ವೈಫಲ್ಯ ಆಗಿರುವುದು ರಣತಂತ್ರವೇ ಅಥವಾ ಪ್ರಮಾದವೇ?ಅದಕ್ಕಿಂತ ಆಚೆ ಇದೊಂದು ಪಿತೂರಿಯಾಗಿ ಕಾಣುತ್ತಿದೆ’’ ಎಂದು ರವಿವಾರ ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ಹೇಳಿದರು.
ನನ್ನ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಪಕ್ಷದ ನಾಯಕರಾದ ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮನೆ ಮೇಲೆಯೂ ದಾಳಿ ನಡೆಸಲಾಗಿದೆ. 20 ಶಾಸಕರನ್ನು ಬಂಧಿಸಲಾಗಿದೆ. ನನ್ನ ಸಂಬಂಧಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಬಿಜೆಪಿ ನಮ್ಮ ಸರಕಾರವನ್ನು ಅಸಾಂವಿಧಾನಿಕ ರೀತಿಯಲ್ಲಿ ಕಿತ್ತೊಗೆಯಲು ನೋಡುತ್ತಿದೆ ಎಂದು ಕೇಜ್ರಿವಾಲ್ ದೂರಿದ್ದಾರೆ.