ಟಿಆರ್ಎಸ್ ನಾಯಕಿ ಕವಿತಾ ಸೋಲಿನ ಆಘಾತದಿಂದ ಬೆಂಬಲಿಗ ಮೃತ್ಯು
ಹೈದರಾಬಾದ್, ಮೇ 27: ಸಾರ್ವತ್ರಿಕ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ಎಸ್) ಅಧ್ಯಕ್ಷ, ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರ ಪುತ್ರಿ ಕವಿತಾ ಸೋಲಿನ ಆಘಾತದಿಂದ ಓರ್ವ ಬೆಂಬಲಿಗ ಮೃತಪಟ್ಟಿದ್ದಾನೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮೃತಪಟ್ಟ ವ್ಯಕ್ತಿಯನ್ನು ಕಿಶೋರ್ ಎಂದು ಗುರುತಿಸಲಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ನಿಝಾಮಾಬಾದ್ ಸಂಸದೀಯ ಕ್ಷೇತ್ರದಿಂದ ಕವಿತಾ ಸೋಲುಂಡ ಬಳಿಕ ಕಿಶೋರ್ ನಿದ್ದೆಯನ್ನೂ ಮಾಡುತ್ತಿರಲಿಲ್ಲ ಮತ್ತು ಆಹಾರವನ್ನೂ ಸೇವಿಸುತ್ತಿರಲಿಲ್ಲ. ಶನಿವಾರ ಈತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಮೃತನ ಮನೆಗೆ ಸೋಮವಾರ ಭೇಟಿ ನೀಡಿದ ಕವಿತಾ, ಮೃತನ ಕುಟುಂಬಕ್ಕೆ ಪಕ್ಷದ ವತಿಯಿಂದ ಸಂಪೂರ್ಣ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಪ್ರಜಾಪ್ರಭುತ್ವದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ. ಇದನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಬೇಕು. ಎದೆಗುಂದದೆ ಮುನ್ನಡೆಯಬೇಕು. ಕಾರ್ಯಕರ್ತರು ಪಕ್ಷದ ಶಕ್ತಿಯಾಗಿದ್ದು, ಯಾವುದೇ ಪರಿಸ್ಥಿತಿಯನ್ನೂ ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದರು.
ನಿಝಾಮಾಬಾದ್ ಸಂಸದೀಯ ಕ್ಷೇತ್ರದಲ್ಲಿ ಕವಿತಾ ಬಿಜೆಪಿಯ ಅರವಿಂದ್ ವಿರುದ್ಧ 71 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದಾರೆ.