ಪ್ರಧಾನಿಯ ಮೌನ ಟ್ರೋಲ್ ಗಳನ್ನು ಉತ್ತೇಜಿಸುತ್ತದೆ: ಅನುರಾಗ್ ಕಶ್ಯಪ್
ಮುಂಬೈ : ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂಬ ಒಂದೇ ಕಾರಣಕ್ಕೆ ಇತ್ತೀಚೆಗೆ ಚಿತ್ರ ನಿರ್ದೇಶಕ ಅನುರಾಗ್ ಕಷ್ಯಪ್ ಅವರ ಪುತ್ರಿಗೆ ಸೋಶಿಯಲ್ ಮೀಡಿಯಾದಲ್ಲಿ ಅತ್ಯಾಚಾರ ಬೆದರಿಕೆಯೊಡ್ಡಲಾಗಿತ್ತು. ಇದರ ನಂತರ ಟ್ವೀಟ್ ಮಾಡಿದ್ದ ಅನುರಾಗ್, ಇಂತಹ ಟ್ರೋಲ್ ಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿಯನ್ನು ವಿನಂತಿಸಿದ್ದರು. ಪ್ರಧಾನಿಯ ಮೌನ ಟ್ರೋಲ್ ಗಳನ್ನು ಉತ್ತೇಜಿಸುತ್ತದೆ ಎಂದು ಅನುರಾಗ್ ಹೇಳಿದ್ದಾರೆ.
"ನಾನು ಬಹಳಷ್ಟು ಟ್ರೋಲ್ ಗೊಳಗಾಗುತ್ತೇನೆ ಆದರೆ ಅವುಗಳನ್ನು ನಿರ್ಲಕ್ಷ್ಯಿಸುತ್ತೇನೆ. ಆದರೆ ನಾನು ಪ್ರಧಾನಿಯನ್ನು ಒಂದು ಕಾರಣಕ್ಕಾಗಿ ಟ್ಯಾಗ್ ಮಾಡಿದ್ದೆ. ಇಂತಹ ಘಟನೆಗಳು ನಡೆಯಬಾರದೆಂದು ಪ್ರಧಾನಿ ಹೇಳಿದ್ದಾರೆ ಆದರೆ ಇಂತಹ ಕೃತ್ಯಗಳು ಶಿಕ್ಷಾರ್ಹ ಎಂದು ಅಧಿಕಾರದಲ್ಲಿರುವವರಲ್ಲಿ ಯಾರಾದರೂ ಹೇಳಿದರೆ ಅದು ತನ್ನಿಂತಾನಾಗಿಯೇ ನಿಲ್ಲುತ್ತದೆ,'' ಎಂದು ಮಾಧ್ಯಮವೊಂದರ ಜತೆ ಮಾತನಾಡುತ್ತಾ ಅನುರಾಗ್ ಹೇಳಿದ್ದಾರೆ.
"ಟ್ರೋಲ್ಗಳು ಒಬ್ಬ ಖ್ಯಾತ ವ್ಯಕ್ತಿಯ ಪರವಾಗಿ ಟ್ವೀಟ್ ಮಾಡಿದಾಗ, ಇದನ್ನು ತಾವು ಸೆಲೆಬ್ರಿಟಿಗಳು ನೋಡುತ್ತಾರೆ ಎಂದು ತಿಳಿಯುವ ಸಾಧ್ಯತೆಯಿದೆ ಎಂದು ಅಂದುಕೊಳ್ಳುತ್ತಾರೆ. ಆದುದರಿಂದ ಟ್ರೋಲಿಂಗ್ ಅಂತ್ಯಗೊಳಿಸಲು ಕಠಿಣ ಶಬ್ದಗಳು ಅಗತ್ಯ,'' ಎಂದರು.
ತಮ್ಮ ಪುತ್ರಿಯನ್ನು ಅತ್ಯಾಚಾರಗೈಯ್ಯುವುದಾಗಿ ಬೆದರಿಕೆ ಹಾಕಿದ ಟ್ರೋಲ್ ವಿರುದ್ಧ ಅನುರಾಗ್ ಅಂಬೋಲಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 504, 509 ಹಾಗೂ 509 ಮತ್ತು ಐಟಿ ಕಾಯಿದೆಯ ಸೆಕ್ಷನ್ 67 ಅನ್ವಯ ಪ್ರಕರಣ ದಾಖಲಿಸಲಾಗಿದೆ.