'ಗೋಡ್ಸೆಗೆ ಧನ್ಯವಾದ' ತಿಳಿಸಿದ ಐಎಎಸ್ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆಗ್ರಹ
ಹೊಸದಿಲ್ಲಿ, ಜೂ. 2: ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ಪ್ರಶಂಶಿಸಿದ ಐಎಎಸ್ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ರವಿವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಆಗ್ರಹಿಸಿದ್ದಾರೆ.
ಮಾಧ್ಯಮ ವರದಿ ಉಲ್ಲೇಖಿಸಿ ಸುರ್ಜೇವಾಲ, ಆರಂಭದಲ್ಲಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಅನಂತರ ಶಾಸಕಿ ಉಷಾ ಠಾಕೂರ್, ಬಳಿಕ ಮಹಾರಾಷ್ಟ್ರ ಐಎಎಸ್ ಅಧಿಕಾರಿ ನಿಧಿ ಚೌಧರಿ ಅವರು ಮಹಾತ್ಮಾ ಗಾಂಧಿಯನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆಯನ್ನು ಪ್ರಶಂಸಿಸಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಿಧಿ ಚೌಧರಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.
ಭಾರತದ ನೋಟುಗಳಲ್ಲಿನ ಮಹಾತ್ಮಾ ಗಾಂಧಿ ಚಿತ್ರ ಅಲ್ಲದೆ, ಜಗತ್ತಿನಾದ್ಯಂತ ಇರುವ ಮಹಾತ್ಮಾ ಗಾಂಧಿ ಪ್ರತಿಮೆಗಳನ್ನು ತೆರವುಗೊಳಿಸಬೇಕು ಎಂದು ಮುಂಬೈಯ ಐಎಎಸ್ ಅಧಿಕಾರಿ ನಿಧಿ ಚೌಧುರಿ ಟ್ವೀಟ್ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ.
ತನ್ನ ಹೇಳಿಕೆ ವಿವಾದಕ್ಕೆ ಒಳಗಾದ ಬಳಿಕ ಬ್ರಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ನ ಉಪ ಮುನ್ಸಿಪಲ್ ಆಯುಕ್ತರಾಗಿ ನಿಯೋಜಿತರಾಗಿರುವ ನಿಧಿ ಚೌಧರಿ ಶನಿವಾರ, ನನ್ನ ಟ್ವೀಟ್ ಅನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ಅನಂತರ ಅವರು ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಮಹಾತ್ಮಾ ಗಾಂಧಿ ವಿರುದ್ಧ ಅವಮಾನಿಸಿ ಹಾಗೂ ಗೋಡ್ಸೆಯನ್ನು ವೈಭವೀಕರಿಸಿ ಟ್ವೀಟ್ ಮಾಡಿರುವುದಕ್ಕೆ ನಿಧಿ ಚೌಧುರಿಯನ್ನು ಅಮಾನತುಗೊಳಿಸುವಂತೆ ಎನ್ಸಿಪಿ ಆಗ್ರಹಿಸಿದೆ.