ಸಮಾಜವಾದಿ ಪಕ್ಷದೊಂದಿಗೆ ದೋಸ್ತಿ ಕಡಿತ ಖಾಯಂ ಅಲ್ಲ: ಮಾಯಾವತಿ
ಹೊಸದಿಲ್ಲಿ,ಜೂ.4: ತನ್ನ ಪಕ್ಷ ಮುಂಬರುವ ವಿಧಾನಸಭಾ ಉಪ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮುಂದಿನ ದಿನಗಳಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮತ್ತೆ ಮುಂದುವರಿಯಬಹುದು. ಮುರಿದುಕೊಂಡಿರುವ ಮೈತ್ರಿ ಖಾಯಂ ಅಲ್ಲ ಎಂದು ಬಿಎಸ್ಪಿ ಸುಪ್ರಿಮೋ ಮಾಯಾವತಿ ಮಂಗಳವಾರ ಹೇಳಿದ್ದಾರೆ.
ಮಾಯಾವತಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸುವ ಉದ್ದೇಶದಿಂದ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಆದರೆ, ಮೈತ್ರಿಯಿಂದ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ.
‘‘ಸಮಾಜವಾದಿ ಪಕ್ಷದ ಮೈತ್ರಿಕೂಟದಿಂದ ತನ್ನ ಪಕ್ಷ ಖಾಯಂ ಆಗಿ ದೂರ ಸರಿದಿಲ್ಲ. ಎಸ್ಪಿ ಅಧ್ಯಕ್ಷ ತನ್ನ ರಾಜಕೀಯ ಕಾರ್ಯದಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ ಎಂದು ನಮಗನಿಸಿದರೆ ಮತ್ತೊಮ್ಮೆ ಜೊತೆಯಾಗುತ್ತೇವೆ. ಆದರೆ, ಅವರು ಯಶಸ್ಸು ಕಾಣದಿದ್ದರೆ ಪ್ರತ್ಯೇಕವಾಗಿ ಸ್ಪರ್ಧಿಸುವುದೇ ಉತ್ತಮ. ಇದೀಗ ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ’’ ಎಂದು ಬುಧವಾರ ಮಾಯಾವತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮಹಾಘಟಬಂಧನ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಕಾರಣ ನೀಡಿದ ಮಾಯಾವತಿ, ‘‘ಎಸ್ಪಿ ಪ್ರಾಬಲ್ಯವಿರುವ ಕ್ಷೇತ್ರದಲ್ಲೂ ಎಸ್ಪಿ ಮತಗಳು ಚಲಾವಣೆಯಾಗಿಲ್ಲ. ಹೀಗಾಗಿ ಗಂಭೀರ ಆತ್ಮಾವಲೋಕನದ ಅಗತ್ಯವಿದೆ. ಒಕ್ಕೂಟದ ಕಾರ್ಯಸಾಧ್ಯತೆಯನ್ನು ಪಕ್ಷದ ಆದೇಶ ನಿರ್ಧರಿಸುವ ಅಗತ್ಯವಿದೆ. ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಯಾದವ ಸಮುದಾಯದವರೇ ಬೆಂಬಲ ನೀಡಿಲ್ಲ. ಎಸ್ಪಿಯ ಪ್ರಬಲ ಅಭ್ಯರ್ಥಿಗಳು ಸೋತಿದ್ದಾರೆ’’ ಎಂದರು.