ದಾಭೋಲ್ಕರ್,ಪನ್ಸಾರೆ ಪ್ರಕರಣಗಳಲ್ಲಿ ನಾನು ಕಕ್ಷಿಯಲ್ಲ: ದೇವೇಂದ್ರ ಫಡ್ನವೀಸ್
ಮುಂಬೈ,ಜೂ.21: ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರ ಹತ್ಯೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತಾನು ಕಕ್ಷಿಯಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶುಕ್ರವಾರ ಇಲ್ಲಿ ಹೇಳಿದರು. ನ್ಯಾಯಾಲಯದ ಮೌಖಿಕ ಹೇಳಿಕೆಗಳು ನ್ಯಾಯಾಂಗ ಆದೇಶಗಳಲ್ಲ ಎಂದರು.
ರಾಷ್ಟ್ರದ ಗಮನ ಸೆಳೆದಿರುವ ಇವೆರಡೂ ಪ್ರಕರಣಗಳಲ್ಲಿ ತನಿಖೆಯ ವಿಳಂಬಗತಿಯ ಕುರಿತು ಕಳೆದ ಮಾರ್ಚ್ನಲ್ಲಿ ಬಾಂಬೆ ಉಚ್ಚ ನ್ಯಾಯಾಲಯವು ತನ್ನ ವಿರುದ್ಧ ಕಟುವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ ಸಂದರ್ಭ ಫಡ್ನವೀಸ್ ಈ ಹೇಳಿಕೆಯನ್ನು ನೀಡಿದರು. ಅವರು ಗೃಹಖಾತೆಯ ಹೊಣೆಯನ್ನೂ ಹೊಂದಿದ್ದಾರೆ.
ಹಿಂದಿನ ನ್ಯಾಯಾಲಯ ಆದೇಶಗಳನ್ನು ಉಲ್ಲೇಖಿಸಿದ ಅವರು,ತಾನು ಈ ಪ್ರಕರಣಗಳಲ್ಲಿ ಪ್ರತಿವಾದಿಯೂ ಅಲ್ಲ, ಆರೋಪಿಯೂ ಅಲ್ಲ. ನ್ಯಾಯಾಲಯಗಳ ಮೌಖಿಕ ಹೇಳಿಕೆಗಳು ನ್ಯಾಯಾಂಗದ ಅಭಿಪ್ರಾಯ ಅಥವಾ ಆದೇಶಗಳಾಗುವುದಿಲ್ಲ ಎಂದರು.
ನ್ಯಾಯಾಂಗ ಮತ್ತು ಶಾಸಕಾಂಗದ ಅಧಿಕಾರಗಳ ನಡುವೆ ಸ್ಪಷ್ಟ ಪ್ರತ್ಯೇಕತೆಯಿದೆ ಮತ್ತು ಈ ವ್ಯವಸ್ಥೆಯನ್ನು ಗೌರವಿಸಬೇಕು ಎಂದರು.
ಕಳೆದ ಮಾರ್ಚ್ನಲ್ಲಿ ದಾಭೋಲ್ಕರ್(ಆಗಸ್ಟ್ 2013) ಮತ್ತು ಪನ್ಸಾರೆ(ಫೆಬ್ರವರಿ 2015) ಹತ್ಯೆಗಳಲ್ಲಿ ತನಿಖೆಯ ವಿಳಂಬಗತಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಉಚ್ಚ ನ್ಯಾಯಾಲಯವು,ಪ್ರಕರಣಗಳ ಬಗ್ಗೆ ಪರಿಶೀಲಿಸಲು ಮುಖ್ಯಮಂತ್ರಿಗಳಿಗೆ ಸಮಯವಿಲ್ಲವೇ ಎಂದು ಪ್ರಶ್ನಿಸಿತ್ತು.