ನಂದಾದೇವಿ ಪರ್ವತದಲ್ಲಿ ಮೃತಪಟ್ಟ 7 ಪರ್ವತರೋಹಿಗಳ ಮೃತದೇಹ ಉತ್ತರಾಖಂಡಕ್ಕೆ
ಡೆಹ್ರಾಡೂನ್, ಜು.3: ಒಂದು ತಿಂಗಳ ಹಿಂದೆ ನಂದಾದೇವಿ ಪೂರ್ವ ಶಿಖರವನ್ನು ಏರುವ ಪ್ರಯತ್ನದಲ್ಲಿ ಮೃತಪಟ್ಟಿದ್ದ 7 ಪರ್ವತರೋಹಿಗಳ ಮೃತದೇಹವನ್ನು ಬುಧವಾರ ಉತ್ತರಾಖಂಡದ ಪಿತೋರಾಗಢ ನಗರಕ್ಕೆ ತರಲಾಗಿದೆ.
ಎಲ್ಲಾ 7 ಮೃತದೇಹಗಳನ್ನೂ ಐಟಿಬಿಪಿ ಪೊಲೀಸರು ಪತ್ತೆಹಚ್ಚಿದ ಬಳಿಕ ಇವನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಉತ್ತರಾಖಂಡದ ನೈನಿ ಸೈನಿ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ಹಲ್ದ್ವಾನಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಗುರುತು ಪತ್ತೆಹಚ್ಚುವ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಗಿರಿಜಾ ಶಂಕರ್ ಜೋಷಿ ಹೇಳಿದ್ದಾರೆ.
ಭಾರತದ ಎರಡನೇ ಅತೀ ಎತ್ತರದ ಪರ್ವತ ನಂದಾದೇವಿ ಪರ್ವತಾರೋಹಣಕ್ಕೆ ಮುನ್ಸಿಯಾರಿ ಗ್ರಾಮದಿಂದ ಮೇ 13ರಂದು 12 ಜನರಿದ್ದ ತಂಡವು ಹೊರಟಿತ್ತು. ಇದರಲ್ಲಿ ನಾಲ್ಕು ಮಂದಿ ಉಳಿದವರಿಂದ ಪ್ರತ್ಯೇಕಿಸಲ್ಪಟ್ಟಿದ್ದರೂ ಮೂಲ ಶಿಬಿರಕ್ಕೆ ಮರಳಿದ್ದರು. ಉಳಿದ 8 ಮಂದಿ ನಿಗದಿತ ದಿನವಾದ ಮೇ 25ರಂದು ಮೂಲ ಶಿಬಿರಕ್ಕೆ ಮರಳದೆ ನಾಪತ್ತೆಯಾಗಿದ್ದರು. ಇವರಲ್ಲಿ 7 ಮಂದಿಯ ಮೃತದೇಹ ಪತ್ತೆಯಾಗಿದ್ದರೆ ಒಬ್ಬ ಪರ್ವತಾರೋಹಿಯ ಸುಳಿವು ಇನ್ನೂ ದೊರಕಿಲ್ಲ.