ಆರ್ ಟಿ ಐ ತಿದ್ದುಪಡಿ ಮಸೂದೆಯನ್ನೇಕೆ ಬೆಂಬಲಿಸಿದಿರಿ?
ವೈಎಸ್ಆರ್ ಕಾಂಗ್ರೆಸ್, ಟಿ ಆರ್ ಎಸ್ ಹಾಗೂ ಬಿಜೆಡಿ ಅಧ್ಯಕ್ಷರುಗಳಿಗೆ ಪತ್ರ ಬರೆದ ಮಾಜಿ ಮಾಹಿತಿ ಆಯುಕ್ತ
ಹೊಸದಿಲ್ಲಿ: ಮೋದಿ ಸರಕಾರ ಜಾರಿಗೆ ತರಲುದ್ದೇಶಿಸಿರುವ ಆರ್ ಟಿ ಐ ತಿದ್ದುಪಡಿ ಮಸೂದೆಗೆ ಬೆಂಬಲವೇಕೆ ಸೂಚಿಸಿದಿರಿ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ(ಟಿ ಆರ್ ಎಸ್) ಹಾಗೂ ಬಿಜು ಜನತಾ ದಳದ ಅಧ್ಯಕ್ಷರುಗಳನ್ನು ಪ್ರಶ್ನಿಸಿ ಮಾಜಿ ಕೇಂದ್ರ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಪತ್ರ ಬರೆದಿದ್ದಾರೆ.
"ನೀವು ಆರ್ ಟಿ ಐ (ತಿದ್ದುಪಡಿ)ಮಸೂದೆ 2019 ಬೆಂಬಲಿಸಿ ಅದರ ಪರ ಮತ ಚಲಾಯಿಸುವಂತೆ ನಿಮ್ಮ ಸಂಸದರಿಗೆ ಹೇಳಿರುವುದು ನನಗೆ ಅಚ್ಚರಿ ತಂದಿದೆ. ನೀವು ಅಥವಾ ನಿಮ್ಮ ಸಂಸದರು ಈ ಮಸೂದೆಯನ್ನು ಓದಿದ್ದೀರಾ ಹಾಗೂ ಪ್ರಸ್ತಾಪಿಸಲಾದ ತಿದ್ದುಪಡಿಗಳ ಪರಿಣಾಮಗಳ ಬಗ್ಗೆ ಅರಿತಿದ್ದೀರಾ ಎಂದು ನನಗೆ ತಿಳಿಯದು. ನೀವು ಮೂವರೂ ಖ್ಯಾತ ವ್ಯಕ್ತಿಗಳಾಗಿದ್ದು ಜನರ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ತ್ಯಾಗಗಳನ್ನು ಮಾಡಿದ್ದೀರಿ ಹಾಗೂ ನೀವು ಪ್ರತಿನಿಧಿಸುವ ಜನರ ಹಿತಾಸಕ್ತಿಗಳನ್ನು ಹಾಗೂ ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ರಾಜ್ಯಗಳ ಸಾರ್ವಭೌಮ ಹಕ್ಕುಗಳನ್ನು ರಕ್ಷಿಸಲು ಶ್ರಮಿಸುತ್ತಿದ್ದೀರಿ ಎಂದು ನಾನು ತಿಳಿದಿದ್ದೆ. ದಯವಿಟ್ಟು ನಿಮ್ಮ ಕಾನೂನು ತಂಡಗಳ ಸಹಾಯ ಪಡೆದು ನಿಮ್ಮ ಸಾರ್ವಭೌಮ ಅಧಿಕಾರಗಳನ್ನು ಈ ಮಸೂದೆ ಹೇಗೆ ನಾಶ ಪಡಿಸುತ್ತದೆ ಎಂಬುದನ್ನು ಮಸೂದೆಗೆ ಬೆಂಬಲ ನೀಡುವ ಮುಂಚೆಯೇ ತಿಳಿಯಬೇಕಿದ್ದರೂ ಈಗಲಾದರೂ ತಿಳಿಯಿರಿ. ನೈತಿಕವಾಗಿ ಕಾನೂನಾತ್ಮಕವಾಗಿ ಹಾಗೂ ಸಂವಿಧಾನತ್ಮಕವಾಗಿ ಹಾಗೂ ರಾಜಕೀಯವಾಗಿ ಈ ಪ್ರಶ್ನೆಗಳಿಗೆ ಉತ್ತರಿಸಲು ನೀವು ಬಾಧ್ಯಸ್ಥರು,'' ಎಂದು ಆಚಾರ್ಯಲು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಇತರ ವಿಪಕ್ಷಗಳ ತೀವ್ರ ವಿರೋಧದ ಹೊರತಾಗಿಯೂ ವೈಎಸ್ಆರ್ ಕಾಂಗ್ರೆಸ್ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ ಹಾಗೂ ಬಿಜು ಜನತಾ ದಳದ ಬೆಂಬಲದೊಂದಿಗೆ ರಾಜ್ಯಸಭೆಯಲ್ಲಿ ಆರ್ ಟಿ ಐ ತಿದ್ದುಪಡಿ ಮಸೂದೆ ಅಂಗೀಕಾರಗೊಳ್ಳುವಂತಾಗಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.