ನಾವೇನು ಪಿಝ್ಝಾ ಡೆಲಿವರಿ ಮಾಡುತ್ತಿದ್ದೇವೆಯೇ?: ವಿಧೇಯಕಗಳ ಅವಸರದ ಅಂಗೀಕಾರ ಪ್ರಶ್ನಿಸಿದ ಸಂಸದ ಡೆರೆಕ್ ಒ'ಬ್ರಿಯಾನ್
ಹೊಸದಿಲ್ಲಿ, ಜು.31: ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರಕಾರ ‘ಅವಸರ'ದಿಂದ ವಿಧೇಯಕಗಳನ್ನು ಅಂಗೀಕರಿಸುತ್ತಿರುವುದನ್ನು ಟೀಕಿಸಿರುವ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರಿಯಾನ್, “ನಾವೇನು ಪಿಝ್ಝಾ ಡೆಲಿವರಿ ಮಾಡುತ್ತಿದ್ದೇವೆಯೇ ಅಥವಾ ವಿಧೇಯಕಗಳನ್ನು ಅಂಗೀಕರಿಸುತ್ತಿದ್ದೇವೆಯೇ?'' ಎಂದು ಟ್ವೀಟ್ ಮಾಡಿದ್ದಾರೆ.
ವಿವಾದಾತ್ಮಕ ತ್ರಿವಳಿ ತಲಾಖ್ ಮಸೂದೆ ರಾಜ್ಯಸಭೆಯ ಅನುಮೋದನೆ ಪಡೆದ ಮರುದಿನವೇ ತೃಣಮೂಲ ಸಂಸದನ ಈ ಟ್ವೀಟ್ ಬಂದಿದೆ.
“ಸಂಸತ್ತು ಮಸೂದೆಗಳನ್ನು ಪರಾಮರ್ಶಿಸಬೇಕಿದೆ” ಎಂದು ತಮ್ಮ ಟ್ವೀಟ್ ನಲ್ಲಿ ಬರೆದಿರುವ ಡೆರೆಕ್, ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿರುವಾಗ ಸಂಸತ್ತು ಪರಾಮರ್ಶಿಸಿದ ಮಸೂದೆಗಳ ಸಂಖ್ಯೆಯನ್ನು ಹೇಳುವ ಚಾರ್ಟ್ ಒಂದನ್ನೂ ನೀಡಿದ್ದಾರೆ. “ಈಗಿನ ಲೋಕಸಭೆ ಅಂಗೀಕರಿಸಿದ 18 ವಿಧೇಯಕಗಳಲ್ಲಿ ಕೇವಲ ಒಂದನ್ನು ಮಾತ್ರ ಪರಾಮರ್ಶಿಸಲಾಗಿದೆ'' ಎಂದು ಅವರು ವಿವರಿಸಿದ್ದಾರೆ.
ಲೋಕಸಭೆಯಲ್ಲಿ ವಿಧೇಯಕಗಳು ಅನುಮೋದನೆ ಪಡೆಯುತ್ತಿರುವ ವೇಗ ಸಂಸತ್ತಿನ ಅಣಕವಾಗಿದೆ ಹಾಗೂ ವಿಪಕ್ಷಗಳ ಕತ್ತು ಹಿಚುಕುವ ಸರಕಾರದ ವಿಧಾನವಾಗಿದೆ ಎಂದು ಮಂಗಳವಾರ ಡೆರೆಕ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.