ಬ್ಯಾಂಕ್ ಸಾಲ ನೀಡದ್ದಕ್ಕೆ ಕಿಡ್ನಿ ಮಾರಾಟಕ್ಕೆ ಮುಂದಾದ ರೈತ!
ಸಹರಣಪುರ(ಉತ್ತರ ಪ್ರದೇಶ): ಹೆಚ್ಚುತ್ತಿರುವ ಸಾಲದಿಂದ ಹತಾಶನಾದ 30 ವರ್ಷದ ರೈತನೊಬ್ಬ ತಮ್ಮ ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದಾರೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಇವರ ಸಾಲಮನವಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಕಿಡ್ನಿ ಮಾರಾಟ ಮಾಡುತ್ತಿರುವುದಾಗಿ ಇವರು ಪೋಸ್ಟರ್ ಹಚ್ಚಿದ್ದಾರೆ.
ಛತ್ತರ್ಸಾಲಿ ಗ್ರಾಮದ ರಾಮಕುಮಾರ್ ಎಂಬ ರೈತ, ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಹೈನುಗಾರಿಕೆ ಕೋರ್ಸ್ ಮುಗಿಸಿದ್ದಾರೆ. ಪಿಎಂಕೆವಿವೈ ಪ್ರಮಾಣಪತ್ರವನ್ನು ತೋರಿಸಿದರೂ ಯಾವುದೇ ಬ್ಯಾಂಕ್ಗಳು ಸಾಲ ನೀಡಲು ಒಪ್ಪಲಿಲ್ಲ ಎಂದು ಅವರು ಹೇಳಿದ್ದಾರೆ.
ಹಸು ಖರೀದಿಗೆ ಮತ್ತು ಕೊಟ್ಟಿಗೆ ನಿರ್ಮಾಣಕ್ಕೆ ಸಂಬಂಧಿಕರಿಂದ ಸಾಲ ಪಡೆದಿದ್ದೇನೆ. ಆ ಹಣವನ್ನು ಬಡ್ಡಿ ಸಹಿತ ಮರಳಿಸುವಂತೆ ಸಂಬಂಧಿಕರು ಒತ್ತಡ ತರುತ್ತಿದ್ದಾರೆ. ಆದ್ದರಿಂದ ಹಣ ವಾಪಾಸು ನೀಡಲು ಕಿಡ್ನಿ ಮಾರಾಟ ಮಾಡುವುದೊಂದೇ ದಾರಿ ಎಂದು ನಿರ್ಧರಿಸಿ, ಪೋಸ್ಟರ್ ಹಾಕಿದ್ದಾಗಿ ರಾಮ್ ಕುಮಾರ್ ವಿವರಿಸಿದ್ದಾರೆ.
ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಸಹರಣಪುರ ಡಿಸಿ ಸಂಜಯ್ ಕುಮಾರ್ ಹೇಳಿದ್ದಾರೆ.