ಕಾಶ್ಮೀರಿ ಮಕ್ಕಳು ಶಾಲೆಗೆ ಮರಳಲು ನೆರವಾಗುವಂತೆ ವಿಶ್ವಸಂಸ್ಥೆಗೆ ಮಲಾಲಾ ಮನವಿ
ಕರಾಚಿ,ಸೆ.15: ಕಾಶ್ಮೀರದ ಮಕ್ಕಳು ಶಾಲೆಗೆ ಮರಳಲು ನೆರವಾಗುವಂತೆ ನೋಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲ ಯೂಸುಫ್ ಝಾಯಿ ಶನಿವಾರ ವಿಶ್ವಸಂಸ್ಥೆಗೆ ಮನವಿ ಮಾಡಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸುವಂತೆ, ಕಾಶ್ಮೀರಿಗಳ ಧ್ವನಿಗಳನ್ನು ಆಲಿಸುವಂತೆ ಮತ್ತು ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಮರಳಲು ನೆರವಾಗುವಂತೆ ನಾನು ವಿಶ್ವಸಂಸ್ಥೆಯ ನಾಯಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಮಲಾಲಾ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರದಲ್ಲಿ ಮಕ್ಕಳು 40 ದಿನಗಳಿಗೂ ಅಧಿಕ ಸಮಯದಿಂದ ಶಾಲೆಗೆ ತೆರಳಿಲ್ಲ ಮತ್ತು ಅಲ್ಲಿ ಜನರನ್ನು ಅನಿಯಂತ್ರಿತವಾಗಿ ಬಂಧಿಸಲಾಗುತ್ತಿದೆ ಎಂಬ ವರದಿಗಳನ್ನು ಓದಿ ನಾನು ಬಹಳ ಆತಂಕಗೊಂಡಿದ್ದೇನೆ ಎಂದು ಪಾಕಿಸ್ತಾನದ ಶಿಕ್ಷಣ ಹೋರಾಟಗಾರ್ತಿ ಮಲಾಲಾ ತಿಳಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ ಸಂವಹನ ಸಾಧನಗಳ ಮೇಲೆ ನಿರ್ಬಂಧ ಹೇರಿರುವುದರಿಂದ ಜನರು ಬಹಳ ಕಷ್ಟದಿಂದ ತಮ್ಮ ಕತೆಗಳನ್ನು ಹೇಳುತ್ತಿದ್ದಾರೆ. ಕಾಶ್ಮೀರಿಗಳು ಜಗತ್ತಿನಿಂದ ಸಂಪರ್ಕ ಕಡಿದುಕೊಳ್ಳುವ ಹಾಗೆ ಮಾಡಲಾಗಿದೆ. ಹಾಗಾಗಿ ಅವರ ಧ್ವನಿಯನ್ನು ಇತರರು ಕೇಳುವಂತೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು 22ರ ಹರೆಯದ ಮಲಾಲಾ ತಿಳಿಸಿದ್ದಾರೆ.