ಕೇಂದ್ರ ಸರಕಾರದಿಂದ ಎಲ್ಐಸಿಯ 30 ಸಾವಿರ ಕೋಟಿ ರೂ. ದುರ್ಬಳಕೆ: ಆರೋಪ
ಹೊಸದಿಲ್ಲಿ, ಸೆ.22: ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಕೇಂದ್ರ ಸರಕಾರ ಭಾರತೀಯ ಜೀವವಿಮಾ ನಿಗಮ(ಎಲ್ಐಸಿ)ದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸ್ಟೇಟ್ ಬ್ಯಾಂಕ್ ಹಾಗೂ ರಿಸರ್ವ್ ಬ್ಯಾಂಕ್ನ ವರದಿಯಂತೆ, ತೀವ್ರ ನಷ್ಟ ಎದುರಿಸುತ್ತಿರುವ ಐಡಿಬಿಐಗೆ ಪುನಶ್ಚೇತನ ನೀಡಲು ಕೇಂದ್ರ ಸರಕಾರ ಎಲ್ಐಸಿಯ ಸುಮಾರು 30,000 ಕೋಟಿ ರೂ.ಯನ್ನು ಒದಗಿಸಿದೆ ಎಂದು ಕಾಂಗ್ರೆಸ್ನ ಹಿರಿಯ ವಕ್ತಾರ ಅಜಯ್ ಮಾಕೆನ್ ಆರೋಪಿಸಿದ್ದಾರೆ.
ಎಲ್ಐಸಿಯಲ್ಲಿ 28.84 ಕೋಟಿ ಹೂಡಿಕೆದಾರರಿದ್ದು, ಒಟ್ಟು ಆಸ್ತಿಯ ಮೊತ್ತ 31.11 ಲಕ್ಷ ಕೋಟಿಯಾಗಿದೆ. 2018ರಲ್ಲಿ ಎಲ್ಐಸಿಯು ಐಡಿಬಿಯಲ್ಲಿರುವ ಶೇರುಗಳನ್ನು ಶೇ.51ರಷ್ಟು ಹೆಚ್ಚಿಸಿ 21000 ಕೋಟಿ ರೂ. ಬಂಡವಾಳ ಒದಗಿಸಿದೆ. ಈ ತಿಂಗಳು ಮತ್ತೆ 9,300 ಕೋಟಿ ಬಂಡವಾಳ ಒದಗಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರ ಹೊರತಾಗಿಯೂ ಈ ವರ್ಷದ ಜೂನ್ನಲ್ಲಿ ಐಡಿಬಿಐ 3,800 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಮಾಕೆನ್ ಹೇಳಿದ್ದಾರೆ.
ತಲಾ ಸಾಲದ ಮೊತ್ತ ಹೆಚ್ಚಳವಾಗಿದೆ. ಮೈಕ್ರೋ ಮತ್ತು ಮ್ಯಾಕ್ರೊ ಎರಡೂ ಹಂತಗಳಲ್ಲಿ ಆರ್ಥಿಕತೆಯನ್ನು ನಿರ್ವಹಿಸಬೇಕಾಗಿದೆ. ಉಳಿಕೆ ಆದಾಯದ ಮೊತ್ತ ಕಡಿಮೆಯಾಗುತ್ತಿದ್ದು ಉಳಿತಾಯದ ಅನುಪಾತ ಶೇ.6ಕ್ಕೆ ಇಳಿದಿದೆ ಎಂದವರು ಹೇಳಿದ್ದಾರೆ.