ಗೋಡ್ಸೆ ದೇಶಭಕ್ತ ಹೇಳಿಕೆಗೆ ಪ್ರಜ್ಞಾ ಠಾಕೂರ್ ಕ್ಷಮೆಯಾಚನೆ
ಹೊಸದಿಲ್ಲಿ, ನ.29: ಸಂಸತ್ತಿನಲ್ಲಿ ನಾನು ನೀಡಿದ್ದ ಹೇಳಿಕೆಯನ್ನು ತಿರುಚಲಾಗಿದೆ. ದೇಶಕ್ಕೆ ಮಹಾತ್ಮಾ ಗಾಂಧಿ ನೀಡಿದ್ದ ಕೊಡುಗೆಯನ್ನು ನಾನು ಗೌರವಿಸುತ್ತೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಕ್ಷಮೆಯಾಚಿಸುತ್ತೇನೆ. ನನ್ನ ಹೇಳಿಕೆಗೆ ಬೇಸರ ವ್ಯಕ್ತಪಡಿಸುವ ಜೊತೆಗೆ ಕ್ಷಮೆಯಾಚಿಸುತ್ತೇನೆ ಎಂದು ಗೋಡ್ಸೆ ಹೆಸರನ್ನು ಪ್ರಸ್ತಾವಿಸದೇ ಸಂಸತ್ತಿನಲ್ಲಿ ಮಾತನಾಡುತ್ತಾ ಪ್ರಜ್ಞಾ ಠಾಕೂರ್ ಹೇಳಿದ್ದಾರೆ.
ನಾಥೂರಾಮ್ ಗೋಡ್ಸೆ ಕುರಿತು ನಾನು ನೀಡಿದ್ದ ಹೇಳಿಕೆಯನ್ನು ವಿರೂಪಗೊಳಿಸಲಾಗಿದೆ.ಸಂಸತ್ತಿನ ಸದಸ್ಯೆಯಾಗಿರುವ ನನ್ನನ್ನು ಭಯೋತ್ಪಾದಕಿ ಎಂದು ಉಲ್ಲೇಖಿಸಿದ್ದನ್ನು ನಾನು ಆಕ್ಷೇಪಿಸುತ್ತೇನೆ ಎಂದು ಪ್ರಜ್ಞಾ ಠಾಕೂರ್ ಶುಕ್ರವಾರ ಹೇಳಿದ್ದಾರೆ.
ಬುಧವಾರ ಸಂಸತ್ತಿನಲ್ಲಿ ಗೋಡ್ಸೆ ದೇಶಭಕ್ತ ಎಂಬರ್ಥದಲ್ಲಿ ಮಾತನಾಡಿದ್ದ ಠಾಕೂರ್ ವಿವಾದ ಸೃಷ್ಟಿಸಿದ್ದರು. ಸ್ಪೀಕರ್ ಅವರು ಠಾಕೂರ್ ಹೇಳಿಕೆಯನ್ನು ಕಡತದಿಂದ ಅಳಿಸಿಹಾಕಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವಿಟರ್ನಲ್ಲಿ ಪ್ರಜ್ಞಾ ಠಾಕೂರ್ರನ್ನು ಓರ್ವ ಭಯೋತ್ಪಾದಕಿ ಎಂದು ಕರೆದಿದ್ದರು.
ಭಯೋತ್ಪಾದಕಿ ಪ್ರಜ್ಞಾ ಭಯೋತ್ಪಾದಕ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ. ಇದು ಭಾರತದ ಸಂಸತ್ತಿನ ಇತಿಹಾಸದಲ್ಲಿ ಬೇಸರದ ದಿನವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ರಾಹುಲ್ ಟ್ವೀಟ್ಗೆ ಪ್ರತಿಕ್ರಿಯಿಸಿದ ಠಾಕೂರ್, ಇದು ನನ್ನ ಘನತೆಯ ಮೇಲಿನ ದಾಳಿಯಾಗಿದೆ. ನನ್ನ ಮೇಲಿನ ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ ಎಂದು ಹೇಳಿದ್ದಾರೆ.