ರಾಜೀನಾಮೆ ನೀಡಿದ ಸರ್ಕಾರಿ ನೌಕರರಿಗೆ ಪಿಂಚಣಿ ಇಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಡಿ.6: ಸರ್ಕಾರಿ ಉದ್ಯೋಗಿಗಳು ರಾಜೀನಾಮೆ ನೀಡುವಾಗ ಹಿಂದಿನ ಸೇವಾವಧಿಯನ್ನು ಕಳೆದುಕೊಳ್ಳುವ ಹಿನ್ನೆಲೆಯಲ್ಲಿ ಕೇಂದ್ರ ನಾಗರಿಕ ಸೇವೆಗಳ ಪಿಂಚಣಿ ನಿಯಮಾವಳಿ ಅನ್ವಯ ಅವರು ಪಿಂಚಣಿ ಪಡೆಯಲು ಅನರ್ಹರಾಗುತ್ತಾರೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬಿಎಸ್ಇಎಸ್ ಯಮುನಾ ಪವರ್ ಲಿಮಿಟೆಡ್ನ ಉದ್ಯೋಗಿಯೊಬ್ಬರ ರಾಜೀನಾಮೆಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ದೇಶದ ಅತ್ಯುನ್ನತ ಕೋರ್ಟ್, ಸ್ವಯಂ ನಿವೃತ್ತಿ ಮತ್ತು ರಾಜೀನಾಮೆ ಪ್ರಕರಣಗಳಲ್ಲಿ ಪಿಂಚಣಿ ಸೌಲಭ್ಯವನ್ನು ಭಿನ್ನ ಎಂದು ಪರಿಗಣಿಸಿದೆ.
"ರಾಜೀನಾಮೆಯಿಂದ ಹಲವು ಕಾನೂನು ಪರಿಣಾಮಗಳು ಎದುರಾಗುತ್ತವೆ. ರಾಜೀನಾಮೆಯ ಕಾನೂನು ಪರಿಣಾಮಗಳು ಸ್ವಯಂ ನಿವೃತ್ತಿ ಕಾರಣದಿಂದ ಎದುರಾಗುವ ಪರಿಣಾಮಗಳಿಗಿಂತ ಭಿನ್ನ. ಆದ್ದರಿಂದ ಸೇವಾವಧಿಯ ಮಾನದಂಡದಲ್ಲಿ ಒಂದನ್ನು ಇನ್ನೊಂದರ ಜತೆ ಹೋಲಿಕೆ ಮಾಡುವಂತಿಲ್ಲ" ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಸಿಸಿಎಸ್ ಪಿಂಚಣಿ ನಿಯಮಾವಳಿಗಳು 2003ರ ಡಿಸೆಂಬರ್ 31ಕ್ಕೆ ಮುನ್ನ ನೇಮಕಗೊಂಡ ಸರ್ಕಾರಿ ನೌಕರರಿಗೆ, ನಾಗರಿಕ ಸೇವೆ ಅಧಿಕಾರಿಗಳಿಗೆ ಹಾಗೂ ರಕ್ಷಣಾ ಸೇವೆಗಳ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಇದರ ಅನ್ವಯ ರಾಜೀನಾಮೆ ನೀಡಿದಾಗ ಉದ್ಯೋಗಿ ತನ್ನ ಸೇವಾವಧಿಯನ್ನು ಕಳೆದುಕೊಳ್ಳುತ್ತಾನೆ. ಆದಾಗ್ಯೂ 20 ವರ್ಷ ಸೇವೆ ಪೂರ್ಣಗೊಳಿಸಿದ ಉದ್ಯೋಗಿ ಸ್ವಯಂನಿವೃತ್ತಿ ಪಡೆಯಲು ಅವಕಾಶವಿದ್ದು, ಇಂಥವರಿಗೆ ಪಿಂಚಣಿ ಸೌಲಭ್ಯಗಳು ದೊರಕುತ್ತವೆ.
ಈ ಪ್ರಕರಣದಲ್ಲಿ ಘನಶ್ಯಾಮ ಚಂದ ಶರ್ಮಾ ಎಂಬ ಉದ್ಯೋಗಿ 1990ರ ಜುಲೈ 7ರಂದು ರಾಜೀನಾಮೆ ನೀಡಿದ್ದರು. ಬಳಿಕ ಪಿಂಚಣಿ ನಿಯಮಾವಳಿಯ ಅನ್ವಯ ಅವರಿಗೆ ಪಿಂಚಣಿ ನಿರಾಕರಿಸಲಾಗಿತ್ತು. ಶರ್ಮಾ 20 ವರ್ಷಗಳ ಸೇವೆ ಸಲ್ಲಿಸದ ಕಾರಣ ಸ್ವಯಂನಿವೃತ್ತಿಗೆ ಅನರ್ಹರು ಎನ್ನುವುದು ಕಂಪೆನಿಯ ವಾದವಾಗಿತ್ತು.