ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ದಿನವೇ ಅತ್ಯಾಚಾರ ಆರೋಪಿ ಸೆಂಗಾರ್ಗೆ ಶುಭ ಕೋರಿದ ಸಾಕ್ಷಿ ಮಹಾರಾಜ್
ಬಿಜೆಪಿ ಸಂಸದನ ವಿರುದ್ಧ ತೀವ್ರ ಆಕ್ರೋಶ
ಫೈಲ್ ಫೋಟೊ
ಲಕ್ನೋ, ಡಿ. 6: ಉನ್ನಾವೊದ ಇನ್ನೋರ್ವ ಅತ್ಯಾಚಾರ ಸಂತ್ರಸ್ತೆ ಮೇಲೆ ದಾಳಿ ನಡೆದ ದಿನವೇ ಅತ್ಯಾಚಾರ ಆರೋಪಿ, ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ಗೆ ಉತ್ತರಪ್ರದೇಶದ ಉನ್ನಾವೊ ಸಂಸದ ಸಾಕ್ಷಿ ಮಹಾರಾಜ್ ಜನ್ಮ ದಿನದ ಶುಭಾಷಯ ಕೋರಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಉನ್ನಾವೊದ ಸಂಸದ ಸಾಕ್ಷಿ ಮಹಾರಾಜ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಹಿಂದಿಯಲ್ಲಿ ಜನ್ಮ ದಿನದ ಶುಭಾಷಯ ಕೋರಿದ್ದಾರೆ. ಉನ್ನಾವೊದ ಬಂಗಾರುಮಾವುನ ಶಾಸಕನಾಗಿದ್ದ ಕುಲದೀಪ್ ಸಿಂಗ್ ಸೆಂಗಾರ್ 16 ವರ್ಷದ ಬಾಲಕಿಯನ್ನು ಅತ್ಯಾಚಾರಗೈದ ಆರೋಪದಲ್ಲಿ ಜೈಲಿನಲ್ಲಿದ್ದಾನೆ. ಈ ವರ್ಷದ ಆರಂಭದಲ್ಲಿ ಆತನನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿತ್ತು. ಟ್ವೀಟ್ ಪೋಸ್ಟ್ ಮಾಡುವ ಗಂಟೆಗಳ ಮೊದಲು ಉನ್ನಾವೊದ 23ರ ಹರೆಯದ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿರುವುದನ್ನು ದುರದೃಷ್ಟಕರ ಘಟನೆ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಸಾಕ್ಷಿ ಮಹಾರಾಜ್ ಪೋಸ್ಟ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ‘‘ಅತ್ಯಾಚಾರ ಆರೋಪಿ ಶಾಸಕನಿಗೆ ಬಿಜೆಪಿ ಸಂಸದ ಜನ್ಮ ದಿನದ ಶುಭಾಷಯ ಕೋರಿದ್ದಾರೆ. ಅದೂ ಉನ್ನಾವೊ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ದಿನ. ಸಂಸದರೇ ಅತ್ಯಾಚಾರ ಆರೋಪಿಗಳಿಗೆ ಬೆಂಬಲಿಸಿದರೆ, ಇತರರು ಕ್ರಿಮಿನಲ್ಗಳ ವಿರುದ್ಧ ಹೋರಾಡುವುದು ಹೇಗೆ’’ ಎಂದು ಪ್ರಶ್ನಿಸಿದ್ದಾರೆ.