ಮಾಲಿನ್ಯಕ್ಕೂ ಜೀವಿತಾವಧಿ ಇಳಿಕೆಗೂ ಸಂಬಂಧ ಇಲ್ಲ: ಕೇಂದ್ರ ಸಚಿವ ಜಾವಡೇಕರ್
ಹೊಸದಿಲ್ಲಿ, ಡಿ. 6: ಮಾಲಿನ್ಯ ಹಾಗೂ ಜೀವಿತಾವಧಿ ಇಳಿಕೆ ನಡುವೆ ಸಂಬಂಧ ಇದೆ ಎಂಬುದನ್ನು ಭಾರತದ ಯಾವುದೇ ಅಧ್ಯಯನ ತಿಳಿಸಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ಹೇಳಿದ್ದಾರೆ.
ಮಾಲಿನ್ಯದಿಂದ ಜೀವಿತಾವಧಿ ಕಡಿತಗೊಳ್ಳುತ್ತಿರುವ ಬಗ್ಗೆ ಯಾವುದಾದರೂ ಅಧ್ಯಯನ ನಡೆದಿದೆಯೇ ಎಂದು ಲೋಕಸಭೆಯಲ್ಲಿ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾವಡೇಕರ್, ‘‘ನಾವು ಜನರಲ್ಲಿ ಭಯವನ್ನು ಸೃಷ್ಟಿಸಬಾರದು’’ ಎಂದರು. ಮಾಲಿನ್ಯ ನಿಯಂತ್ರಿಸಲು ಸರಕಾರ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಹಾಗೂ ಇದರಿಂದ ಫಲಿತಾಂಶ ದೊರೆಯಲಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಅವರು ತಿಳಿಸಿದರು.
ದೇಶದಲ್ಲಿ ವಾಯು ಮಾಲಿನ್ಯದ ಸಮಸ್ಯೆ ನಿಗ್ರಹಿಸಲು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮವನ್ನು ಕೇಂದ್ರ ಸರಕಾರ ಆರಂಭಿಸಿದೆ ಎಂದು ಜಾವಡೇಕರ್ ತಿಳಿಸಿದರು.
Next Story