ನರೇಂದ್ರ ಮೋದಿಗೆ 2002 ಗುಜರಾತ್ ಹಿಂಸಾಚಾರ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದ ನಾನಾವತಿ ಆಯೋಗ
ಗಾಂಧಿನಗರ್: ನಾನಾವತಿ ಆಯೋಗವು ನರೇಂದ್ರ ಮೋದಿ ನೇತೃತ್ವದ ಹಿಂದಿನ ಗುಜರಾತ್ ಸರಕಾರಕ್ಕೆ 2002ರಲ್ಲಿ 1000ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದ ಮತೀಯ ಹಿಂಸಾಚಾರ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದೆ. ಆಯೋಗದ ವರದಿಯನ್ನು ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಹಿಂದಿನ ರಾಜ್ಯ ಸರಕಾರಕ್ಕೆ ಈ ವರದಿ ಸಲ್ಲಿಕೆಯಾದ ಐದು ವರ್ಷಗಳ ನಂತರ ಈಗಿನ ಸರಕಾರದ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ವರದಿಯ ಅಂತಿಮ ಭಾಗವನ್ನು ಇಂದು ಮಂಡಿಸಿದ್ದಾರೆ. ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ನಂತರ ಉಂಟಾದ ಹಿಂಸಾಚಾರ ಪೂರ್ವನಿಯೋಜಿತ ಘಟನೆಯಲ್ಲ ಹಾಗೂ ರಾಜ್ಯ ಸರಕಾರ ಅದನ್ನು ನಿಯಂತ್ರಿಸಲು ಎಲ್ಲಾ ಸಾಧ್ಯ ಕ್ರಮ ಕೈಗೊಂಡಿತ್ತು ಎಂದು ವರದಿ ಹೇಳಿದೆ ಹಾಗೂ ಮೋದಿ ಸಹಿತ ಇತರರಿಗೆ ಕ್ಲೀನ್ ಚಿಟ್ ನೀಡಿದೆ.
ಆಯೋಗದ ವರದಿಯ ಮೊದಲ ಭಾಗವನ್ನು 2009ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. ವರದಿಯ ಈ ಭಾಗವು 59 ಕರಸೇವಕರ ಬಲಿ ಪಡೆದ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆಯ ಕುರಿತಾಗಿತ್ತು. ಹಿಂದಿನ ಗುಜರಾತ್ ಸಿಎಂ ಆನಂದಿಬೆನ್ ಪಟೇಲ್ ಅವರಿಗೆ 2014ರಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಜಿ ಟಿ ನಾನಾವತಿ ಹಾಗೂ ಅಕ್ಷಯ್ ಮೆಹ್ತಾ ಅಂತಿಮ ವರದಿಯನ್ನು ಸಲ್ಲಿಸಿದ್ದರು.
ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಸರಕಾರ ಗುಜರಾತ್ ಹೈಕೋರ್ಟಿಗೆ ನೀಡಿದ ಮಾಹಿತಿಯಲ್ಲಿ ತಾನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ವರದಿಯ ಅಂತಿಮ ಭಾಗವನ್ನು ಮಂಡಿಸುವುದಾಗಿ ತಿಳಿಸಿತ್ತು. ವರದಿಯನ್ನು ಸಾರ್ವಜನಿಕರ ಮುಂದಿಡುವಂತೆ ಕೋರಿ ಮಾಜಿ ಐಪಿಎಸ್ ಅಧಿಕಾರಿ ಆರ್ ಬಿ ಶ್ರೀಕುಮಾರ್ ಅವರು ಸಲ್ಲಿಸಿದ್ದ ಪಿಐಎಲ್ ಮೇಲಿನ ವಿಚಾರಣೆ ಸಂದರ್ಭ ಈ ಆಶ್ವಾಸನೆ ನೀಡಲಾಗಿತ್ತು.
2002ರಲ್ಲಿ ಆಗಿನ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಗೋಧ್ರಾ ಘಟನೆ ಹಾಗೂ ನಂತರದ ಮತೀಯ ಹಿಂಸಾಚಾರದ ತನಿಖೆ ನಡೆಸಲು ಏಕ ಸದಸ್ಯ ಆಯೋಗವನ್ನು ರಚಿಸಿದ್ದರು. ನಂತರ ಸರಕಾರ ಈ ಆಯೋಗವನ್ನು ಪುನಾರಚಿಸಿ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಜಿ ಟಿ ನಾನಾವತಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಮಾಜಿ ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಕೆ ಜಿ ಶಾ ಅವರನ್ನು ಸದಸ್ಯರನ್ನಾಗಿ ನೇಮಿಸಿತ್ತು. ಜಸ್ಟಿಸ್ ಶಾ ನಿಧನಾನಂತರ ಅವರ ಸ್ಥಾನಕ್ಕೆ ಜಸ್ಟಿಸ್ ಎ ಕೆ ಮೆಹ್ತಾ ಅವರನ್ನು ನೇಮಿಸಲಾಗಿತ್ತು.
ಆಯೋಗಕ್ಕೆ ಮೊದಲು ತನಿಖೆ ಪೂರ್ಣಗೊಳಿಸಲು ಆರು ತಿಂಗಳು ನೀಡಲಾಗಿದ್ದರೂ ಹಲವಾರು ವಿಸ್ತರಣೆಗಳ ಬಳಿಕ ಮೊದಲ ವರದಿ 2009ರಲ್ಲಿ ಹಾಗೂ ಅಂತಿಮ ವರದಿ 2014ರಲ್ಲಿ ಸಲ್ಲಿಕೆಯಾಗಿತ್ತು.