ಪೌರತ್ವ ಕಾಯ್ದೆ ವಿರುದ್ಧ ಅನಿರ್ದಿಷ್ಟ ಧರಣಿ ಆರಂಭಿಸಿದ ಬಿಜೆಪಿ ಮಿತ್ರ ಪಕ್ಷ
ಅಗರ್ತಲಾ: ತ್ರಿಪುರಾದಲ್ಲಿ ಆಡಳಿತ ಬಿಜೆಪಿಯ ಮಿತ್ರಪಕ್ಷವಾಗಿರುವ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್ಟಿ) ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಅನಿರ್ದಿಷ್ಟಾವಧಿ ಧರಣಿಯನ್ನು ಸೋಮವಾರದಿಂದ ತ್ರಿಪುರಾ ಆದಿವಾಸಿ ಪ್ರದೇಶಗಳ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಮುಖ್ಯ ಕಾರ್ಯಾಲಯದ ಸಮೀಪ ಆರಂಭಿಸಿದೆ. ಆದಿವಾಸಿ ಕೌನ್ಸಿಲ್ ಅನ್ನು ರಾಜ್ಯದಿಂದ ಪ್ರತ್ಯೇಕಿಸಿ ಪ್ರತ್ಯೇಕ ತಿಪ್ರಾಲ್ಯಾಂಡ್ ಸ್ಥಾಪಿಸಬೇಕೆಂಬ ಬೇಡಿಕೆಯನ್ನೂ ಪಕ್ಷ ಮುಂದಿಟ್ಟಿದೆ.
ತನ್ನ ಬೇಡಿಕೆಗಳಿಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುವ ತನಕ ಧರಣಿ ಮುಂದುವರಿಯಲಿದೆ ಎಂದು ಪಕ್ಷದ ವಕ್ತಾರ ಮಂಗಲ್ ದೆಬ್ಬರ್ಮ ಹೇಳಿದ್ದಾರೆ.
``ರಾಜ್ಯದಲ್ಲಿ ಆದಿವಾಸಿಗಳ ಆಕ್ರೋಶಕ್ಕೆ ಅಂತ್ಯ ಹಾಡಲು ಪ್ರತ್ಯೇಕ ತಿಪ್ರಾಲ್ಯಾಂಡ್ ಒಂದೇ ಪರಿಹಾರವಾಗಿದೆ. ನಮ್ಮ ಮಿತ್ರ ಪಕ್ಷ ಬಿಜೆಪಿ ನಮ್ಮ ನಿಲುವನ್ನು ಒಪ್ಪದೇ ಇದ್ದರೂ ಸೌಹಾರ್ದಯತವಾಗಿ ಸಮಸ್ಯೆ ಇತ್ಯರ್ಥವಾಗುವ ತನಕ ಪ್ರತಿಭಟನೆ ಮುಂದುವರಿಯಲಿದೆ'' ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮೇವರ್ ಕುಮಾರ್ ಜಮಾತಿಯ ಹೇಳಿದ್ದಾರೆ.
ಸಿಎಎ ಜಾರಿಯಾದ ಬೆನ್ನಿಗೇ ವಿವಿಧ ಆದಿವಾಸಿ ಸಂಘಟನೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದಿಲ್ಲಿಯಲ್ಲಿ ಡಿಸೆಂಬರ್ 12ರಂದು ಭೇಟಿಯಾಗಿದ್ದಾಗ ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ಭರವಸೆ ನೀಡಿದ್ದ ಅವರಿಂದ ಮತ್ತೆ ಯಾವುದೇ ಸಕಾರಾತ್ಮಕ ಕ್ರಮ ಬಂದಿಲ್ಲ ಎಂದು ಪಕ್ಷದ ನಾಯಕರು ದೂರಿದ್ದಾರೆ.