ಜೆಎನ್ಯು ದಾಳಿ ಖಂಡಿಸಿದ ನಟ ಸುನೀಲ್ ಶೆಟ್ಟಿ
ಹೊಸದಿಲ್ಲಿ : ನಟಿ ದೀಪಿಕಾ ಪಡುಕೋಣೆ ಜೆಎನ್ಯುವಿಗೆ ಭೇಟಿ ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ನಟ ಸುನೀಲ್ ಶೆಟ್ಟಿ ಕೂಡ ವಿವಿಯಲ್ಲಿ ರವಿವಾರ ನಡೆದ ದಾಳಿಯನ್ನು ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ.
ಘಟನೆಯನ್ನು ಸಂಪೂರ್ಣ ವಿನಾಶಕಾರಿ ಎಂದು ಬಣ್ಣಿಸಿದ ಶೆಟ್ಟಿ, "ಹಿಂದೂ ಆಗಿರಬಹುದು, ಮುಸ್ಲಿಂ, ಸಿಖ್ ಅಥವಾ ಕ್ರೈಸ್ತನಾಗಿರಬಹುದು, ಬಿಜೆಪಿ, ಕಾಂಗ್ರೆಸ್, ಶಿವಸೇನೆ, ಎನ್ಸಿಪಿ ಅಥವಾ ಬೇರೆ ಯಾವುದೇ ಪಕ್ಷದವರಾಗಿರಬಹುದು, ಯಾರಿಗೂ ಜ್ಞಾನದೇಗುಲ ಪ್ರವೇಶಿಸಿ ಮಕ್ಕಳಿಗೆ ಹೊಡೆಯುವ ಅಧಿಕಾರವಿಲ್ಲ,'' ಎಂದು ಮನರಂಜನಾ ವೆಬ್ಸೈಟ್ 'SpotboyE' ಜತೆಗಿನ ಸಂದರ್ಶನದಲ್ಲಿ ಶೆಟ್ಟಿ ಹೇಳಿದ್ದಾರೆ.
"ನೀವು ಮುಖಕ್ಕೆ ಮುಸುಕು ಧರಿಸಿ ನಿಮ್ಮನ್ನು ಗಂಡಸರೆಂದು ಹೇಳಿಕೊಳ್ಳುತ್ತೀರಾ ? ನೀವು ನಿಜವಾಗಿಯೂ ಗಂಡಸರಾಗಿದ್ದರೆ ಮುಸುಕು ಧರಿಸದೆ ಓಡಾಡಬೇಕು,'' ಎಂದ ಶೆಟ್ಟಿ ಈ ಘಟನೆಯ ಹಿಂದೆ ಯಾವ ರಾಜಕೀಯ ಪಕ್ಷ ಇದೆಯೆಂದು ತಮಗೆ ತಿಳಿದಿಲ್ಲ ಎಂದರು. 'ಯಾವುದೇ ಪಕ್ಷ ಅದನ್ನು ಮಾಡಿದ್ದರೂ ಅದು ಸರಿಯಲ್ಲ' ಎಂದು ಅವರು ಹೇಳಿದರು.