ರಾಜ್ಯಪಾಲರಿಗೆ ಕರೆ ಮಾಡಿ ತನ್ನನ್ನು ಅಮಿತ್ ಶಾ ಎಂದು ಪರಿಚಯಿಸಿದ ವಾಯುಸೇನೆಯ ವಿಂಗ್ ಕಮಾಂಡರ್ ಸೆರೆ
ಭೋಪಾಲ್ : ತನ್ನ ಸ್ನೇಹಿತನನ್ನು ವೈದ್ಯಕೀಯ ವಿವಿಯೊಂದರ ಉಪಕುಲಪತಿಯನ್ನಾಗಿಸಲು ಸಹಾಯ ಮಾಡುವ ಸಲುವಾಗಿ ರಾಜ್ಯಪಾಲ ಲಾಲಜಿ ಟಂಡನ್ ಅವರಿಗೆ ಫೋನ್ ಮಾಡಿ ತನ್ನನ್ನು ಗೃಹ ಸಚಿವ ಅಮಿತ್ ಶಾ ಎಂದು ಪರಿಚಯಿಸಿಕೊಂಡು ವಂಚಿಸಲು ಯತ್ನಿಸಿದ ಭಾರತೀಯ ವಾಯುಸೇನೆಯ ಹಿರಿಯ ಅಧಿಕಾರಿಯೊಬ್ಬರನ್ನು ಮಧ್ಯ ಪ್ರದೇಶ ಎಸ್ಟಿಎಫ್ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿ, ವಿಂಗ್ ಕಮಾಂಡರ್ ಕುಲದೀಪ್ ಬಘೇಲಾ ಅವರು ದಿಲ್ಲಿಯ ಐಎಎಫ್ ಮುಖ್ಯ ಕಾರ್ಯಾಲಯದಲ್ಲಿ ಕರ್ತವ್ಯದಲ್ಲಿದ್ದಾನೆ. ಬಘೇಲಾ ಸ್ನೇಹಿತ, ಭೋಪಾಲ್ನಲ್ಲಿ ದಂತವೈದ್ಯನಾಗಿರುವ ಚಂದ್ರೇಶ್ ಕುಮಾರ್ ಶುಕ್ಲಾ ಎಂಬಾತನನ್ನೂ ಬಂಧಿಸಲಾಗಿದೆ. ಆತ ಫೋನ್ ಕರೆ ವೇಳೆ ತನ್ನನ್ನು ಅಮಿತ್ ಶಾ ಅವರ ಆಪ್ತ ಸಹಾಯಕ ಎಂದು ಬಣ್ಣಿಸಿದ್ದ.
ಜಬಲ್ಪುರ್ ನಗರದಲ್ಲಿರುವ ಮಧ್ಯಪ್ರದೇಶ ಮೆಡಿಕಲ್ ಸಾಯನ್ಸ್ ಯುನಿವರ್ಸಿಟಿಯ ಉಪಕುಲಪತಿ ಹುದ್ದೆಗೆ ಆರೋಪಿ ತನ್ನ ಸ್ನೇಹಿತನ ಹೆಸರನ್ನು ಶಿಫಾರಸು ಮಾಡಲು ಬಘೇಲಾ ಈ ದುಸ್ಸಾಹಸಕ್ಕೆ ಕೈಹಾಕಿದ್ದ. ಆದರೆ ರಾಜ್ಯಪಾಲರ ಕಚೇರಿ ಅಧಿಕಾರಿಗಳಿಗೆ ಸಂಶಯ ಬಂದು ಪರಿಶೀಲನೆ ನಡೆಸಿದಾಗ ವಂಚಕರು ಕರೆ ಮಾಡಿದ್ದೆಂದು ತಿಳಿದು ಎಸ್ಟಿಎಫ್ಗೆ ದೂರು ನೀಡಲಾಗಿತ್ತು.