ಮೋದಿಯನ್ನು ಶಿವಾಜಿಗೆ ಹೋಲಿಸಿದ ಪುಸ್ತಕದ ವಿರುದ್ಧ ಭಾರೀ ಪ್ರತಿಭಟನೆ
ಪುಣೆ, ಜ.13: ಪ್ರಧಾನಿ ನರೇಂದ್ರ ಮೋದಿಯನ್ನು ಶಿವಾಜಿಗೆ ಹೋಲಿಸಿ ಬರೆದಿರುವ ‘ಇಂದಿನ ಶಿವಾಜಿ: ನರೇಂದ್ರ ಮೋದಿ’ ಪುಸ್ತಕದ ವಿರುದ್ಧ ಪುಣೆಯಲ್ಲಿ ಎನ್ಸಿಪಿ ಹಾಗೂ ಸಂಭಾಜಿ ಬ್ರಿಗೇಡ್ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ಬಿಜೆಪಿಯ ಜಯ ಭಗವಾನ್ ಗೋಯಲ್ ಈ ಪುಸ್ತಕ ಬರೆದಿದ್ದಾರೆ. ಪುಣೆಯ ಲಾಲ್ಮಹಲ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎನ್ಸಿಪಿ ಮುಖಂಡ ಪ್ರಶಾಂತ್ ಜಗತಾಪ್, ಈ ರೀತಿಯ ಹೋಲಿಕೆ ಸರಿಯಲ್ಲ. ಮರಾಠಾ ಚಕ್ರವರ್ತಿಯ ಭವ್ಯ ಇತಿಹಾಸವನ್ನು ಅಳಿಸಿ ಹಾಕುವ ಹುನ್ನಾರ ಇದಾಗಿದೆ. ಇವತ್ತು ಶಿವಾಜಿ ಮಹಾರಾಜರೊಂದಿಗೆ ಹೋಲಿಸಿದವರು ನಾಳೆ ರಾಜಸ್ತಾನದಲ್ಲಿ ರಾಣಾ ಪ್ರತಾಪರೊಂದಿಗೆ ಹೋಲಿಸಬಹುದು. ಇದು ಮಹಾನ್ ನಾಯಕರ ಇತಿಹಾಸವನ್ನು ಅಳಿಸಿ ಹಾಕುವ ಬಿಜೆಪಿ- ಆರೆಸ್ಸೆಸ್ ಅಜೆಂಡಾದ ಒಂದು ಭಾಗವಾಗಿದೆ. ಈ ಪುಸ್ತಕವನ್ನು 48 ಗಂಟೆಯೊಳಗೆ ಹಿಂಪಡೆಯದಿದ್ದರೆ ಇನ್ನಷ್ಟು ತೀವ್ರ ಪ್ರತಿಭಟನೆ ನಡೆಯಲಿದೆ ಎಂದರು.
ಪುಸ್ತಕಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅದರಲ್ಲಿ ಬರೆದಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಬಿಜೆಪಿಯ ಮಾಧ್ಯಮ ಮುಖ್ಯಸ್ಥ ಸಂಜಯ್ ಮಯೂಖ್ ಹೇಳಿದ್ದಾರೆ. ಪುಸ್ತಕದ ವಿರುದ್ಧ ಟೀಕೆ ಹೆಚ್ಚುತ್ತಿರುವಂತೆಯೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಲೇಖಕ ಜಯಭಗವಾನ್ ಗೋಯಲ್, ಶಿವಾಜಿ ಮಹಾರಾಜರಂತೆಯೇ ಪ್ರಧಾನಿ ಮೋದಿ ಕೂಡಾ ಎಲ್ಲರನ್ನೂ ಜೊತೆಗೇ ಕೊಂಡೊಯ್ಯುವ ನಾಯಕರಾಗಿದ್ದಾರೆ. ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಶಿವಾಜಿಯ ಮನೋಬಲ ಮೋದಿಯವರಿಗಿದೆ ಎಂಬುದಷ್ಟೇ ತನ್ನ ಆಶಯವಾಗಿದೆ. ಇದರಿಂದ ಕೆಲವು ವ್ಯಕ್ತಿಗಳ ಭಾವನೆಗೆ ಘಾಸಿಯಾಗುವುದಾದರೆ ಪುಸ್ತಕದ ಕೆಲವು ಭಾಗಗಳನ್ನು ಪರಿಷ್ಕರಿಸಲು ಸಿದ್ಧ ಎಂದು ಹೇಳಿದ್ದಾರೆ.