ಹಿಂದಿನ ಬಿಜೆಪಿ ಸರಕಾರ ನನ್ನ ದೂರವಾಣಿಯನ್ನೂ ಕದ್ದಾಲಿಸಿತ್ತು:ಶಿವಸೇನೆ ನಾಯಕ ಸಂಜಯ್ ರಾವತ್
ಮುಂಬೈ,ಜ.24: ಮಹಾರಾಷ್ಟ್ರದಲ್ಲಿ ಹಿಂದೆ ಬಿಜೆಪಿಯು ಅಧಿಕಾರದಲ್ಲಿದ್ದಾಗ ಎನ್ಸಿಪಿ ಮತ್ತು ಶಿವಸೇನೆ ವರಿಷ್ಠರಾದ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಸೇರಿದಂತೆ ಹಿರಿಯ ಪ್ರತಿಪಕ್ಷ ನಾಯಕರ ದೂರವಾಣಿಗಳನ್ನು ಕದ್ದಾಲಿಸಿತ್ತು ಎಂಬ ಆರೋಪಗಳ ನಡುವೆಯೇ ಸೇನೆಯ ನಾಯಕ ಸಂಜಯ್ ರಾವತ್ ಅವರು,ತನ್ನ ದೂರವಾಣಿ ಕರೆಗಳು ಮತ್ತು ಸಂದೇಶಗಳ ಮೇಲೆ ನಿಗಾಯಿರಿಸಲಾಗಿದೆ ಎಂದು ಹಿರಿಯ ಬಿಜೆಪಿ ಸಚಿವರೋರ್ವರು ತನಗೆ ತಿಳಿಸಿದ್ದರು ಎಂದು ಶುಕ್ರವಾರ ತಿಳಿಸಿದ್ದಾರೆ.
‘ನನ್ನ ಮಾತುಕತೆಗಳನ್ನು ಆಲಿಸಲು ಬಯಸುವ ಯಾರಿಗೇ ಆದರೂ ಸುಸ್ವಾಗತವಿದೆ. ನಾನು ಬಾಳ್ ಠಾಕ್ರೆಯವರ ಶಿಷ್ಯ. ನಾನು ರಹಸ್ಯವಾಗಿ ಏನನ್ನೂ ಹೇಳುವುದಿಲ್ಲ ಅಥವಾ ಮಾಡುವುದಿಲ್ಲ. ಎಲ್ಲವೂ ಮುಕ್ತವಾಗಿದೆ,ಯಾವುದನ್ನೂ ಬಚ್ಚಿಡುವುದಿಲ್ಲ. ಹೀಗಾಗಿ ನನ್ನ ಫೋನ್ ಕದ್ದಾಲಿಕೆಯನ್ನು ಮುಂದುವರಿಸಿ’ ಎಂದು ತಾನು ಬಿಜೆಪಿ ಸಚಿವರಿಗೆ ತಿಳಿಸಿದ್ದೆ ಎಂದು ರಾವತ್ ಟ್ವೀಟಿಸಿದ್ದಾರೆ.
ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ನೇತೃತ್ವದ ಹಿಂದಿನ ಸರಕಾರವು ಹಿರಿಯ ಪ್ರತಿಪಕ್ಷ ನಾಯಕರ ದೂರವಾಣಿಗಳನ್ನು ಕದ್ದಾಲಿಸಲು ಸರಕಾರಿ ಯಂತ್ರವನ್ನು ದುರುಪಯೋಗಿಸಿಕೊಂಡಿತ್ತು ಎಂದು ಗುರುವಾರ ಆರೋಪಿಸಿದ್ದ ಮಹಾರಾಷ್ಟ್ರ ಗೃಹಸಚಿವ ಅನಿಲ ದೇಶಮುಖ ಅವರು,ಈ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರ ಪೊಲೀಸ್ನ ಸೈಬರ್ಸೆಲ್ಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದರು.