ಶಾಹೀನ್ ಭಾಗ್ ಕುರಿತ ಶಾ ಹೇಳಿಕೆಗೆ ಚಿದಂಬರಂ ತಿರುಗೇಟು
ಹೊಸದಿಲ್ಲಿ, ಜ.27: ಶಾಹೀನ್ ಭಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ತಿರುಗೇಟು ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ, ಮಹಾತ್ಮಾ ಗಾಂಧೀಜಿಯವರನ್ನು ಕಡೆಗಣಿಸುವವರು ಮಾತ್ರ ಶಾಹೀನ್ ಭಾಗ್ ಅನ್ನು ತೊಲಗಿಸಲು ಪ್ರಯತ್ನಿಸುತ್ತಾರೆ ಎಂದು ಹೇಳಿದ್ದಾರೆ.
ದಿಲ್ಲಿಯಲ್ಲಿ ಯಾವುದೇ ಶಾಹೀನ್ ಭಾಗ್ ಇರಬಾರದು. ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಮಲದ ಗುರುತಿಗೆ ಇವಿಎಂನ ಬಟನ್ ಅನ್ನು ಒತ್ತುವಾಗ ನಿಮ್ಮ ಕೋಪದಿಂದ ಶಾಹೀನ್ ಭಾಗ್ನಲ್ಲಿ ಪ್ರತಿಭಟಿಸುವವರಿಗೆ ಶಾಕ್ ಆಗುವಂತಿರಬೇಕು ಎಂದು ಅಮಿತ್ ಶಾ ಶನಿವಾರ ಹೇಳಿಕೆ ನೀಡಿದ್ದರು. ಶಾಹೀನ್ ಭಾಗ್ ಅನ್ನು ಅಳಿಸಿಹಾಕಲು ಗೃಹ ಸಚಿವರು ಬಯಸುತ್ತಿದ್ದಾರೆ. ಶಾಹೀನ್ಭಾಗ್ ಮಹಾತ್ಮಾ ಗಾಂಧೀಜಿಯವರ ಜೀವಾಳವಾಗಿದೆ. ಗಾಂಧೀಜಿಯವರನ್ನು ತಿರಸ್ಕರಿಸುವವರು ಮಾತ್ರ ಶಾಹೀನ್ ಭಾಗನ್ನು ಅಳಿಸಿಹಾಕಲು ಬಯಸುತ್ತಾರೆ. ಶಾಹೀನ್ಭಾಗ್ ಅಳಿಸಿಹಾಕುವುದು ಅಹಿಂಸೆ ಮತ್ತು ಸತ್ಯಾಗ್ರಹವನ್ನು ಅಳಿಸಿಹಾಕುವುದಕ್ಕೆ ಸಮವಾಗಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.