ಪೌರತ್ವ ತಿದ್ದುಪಡಿ ಕಾಯ್ದೆ: ನಾಸಿರುದ್ದೀನ್ ಶಾ ಹೇಳಿಕೆ ಸಮರ್ಥಿಸಿಕೊಂಡ ಪುತ್ರ
ಹೊಸದಿಲ್ಲಿ, ಜ. 29: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಹಿರಿಯ ನಟ ನಾಸಿರುದ್ದೀನ್ ಶಾ ನೀಡಿದ ಹೇಳಿಕೆಯನ್ನು ಅವರ ಪುತ್ರ ವಿವಾನ್ ಶಾ ಸಮರ್ಥಿಸಿಕೊಂಡಿದ್ದಾರೆ. “ನನ್ನ ತಂದೆ ಈ ದೇಶದ ನಾಗರಿಕರಾಗಿ ಆತಂಕಗೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.
‘‘ಕಳವಳಗೊಂಡಿರುವ ಕಾರಣಕ್ಕಾಗಿ ಜನರು ಈ ವಿಷಯದ ಕುರಿತು ಪ್ರತಿಭಟನೆ ನಡೆಸುತ್ತಿದ್ದಾರೆ ಹಾಗೂ ಧ್ವನಿ ಎತ್ತುತ್ತಿದ್ದಾರೆ. ಅವರು ದೇಶವನ್ನು ಪ್ರೀತಿಸುತ್ತಿದ್ದಾರೆ. ದೇಶದ ಮೇಲಿನ ತೀವ್ರ ಪ್ರೀತಿಯ ಕಾರಣಕ್ಕೆ ಅವರು ಈ ಹೇಳಿಕೆ ನೀಡಿದರು ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ ಎಂದು ನಾನು ಭಾವಿಸುತ್ತೇನೆ. ಇದು ದೇಶ ವಿರೋಧಿ ಅಲ್ಲ. ಸತ್ಯವೇನೆಂದರೆ, ಇಂದು ಸಂಪೂರ್ಣ ದೇಶಪ್ರೇಮ. ಪ್ರತಿಯೊಬ್ಬರೂ ದೇಶದ ಮೇಲಿನ ಪ್ರೀತಿ ಹಾಗೂ ದೇಶಭಕ್ತಿಯ ಕಾರಣಕ್ಕೆ ಈ ಪ್ರತಿಭಟನೆ ನಡೆಸುತ್ತಿದ್ದಾರೆ’’ ಎಂದು ವಿವಾನ್ ಹೇಳಿದ್ದಾರೆ.
ಈ ಹಿಂದೆ ‘ದಿ ವೈರ್’ನೊಂದಿಗಿನ ಸಂದರ್ಶನದಲ್ಲಿ ನಾಸಿರುದ್ದೀನ್ ಶಾ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೀರ್ಘವಾಗಿ ಮಾತನಾಡಿದ್ದರು. ಭಾರತದ ನಾಗರಿಕನಾಗಲು ಇಲ್ಲಿ 70 ವರ್ಷಗಳ ವಾಸ್ತವ್ಯ ಸಾಕಾಗುವುದಿಲ್ಲವೇ ? ಎಂದು ಪ್ರಶ್ನಿಸಿದ್ದರು. ಅಲ್ಲದೆ ಸರಕಾರದ ನಡೆಯ ಬಗ್ಗೆ ಬೆಂಬಲ ವ್ಯಕ್ತಪಡಿಸಿರುವ ನಟ ಅನುಪಮ್ ಖೇರ್ ಅವರನ್ನು ಟೀಕಿಸಿದ್ದರು.