“ದಿಲ್ಲಿ ಚುನಾವಣೆ ನಂತರ ಶಾಹಿನ್ ಬಾಗ್ ಜಲಿಯನ್ ವಾಲಾಬಾಗ್ ಆಗಬಹುದು”
ಒವೈಸಿ ಆತಂಕ
ಹೈದರಾಬಾದ್, ಜ. 6: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಶಾಹೀನ್ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಕಾರರನ್ನು ತೆರವುಗೊಳಿಸಲು ಕೇಂದ್ರ ಸರಕಾರ ಫೆಬ್ರವರಿ 8ರ ಬಳಿಕ ಸೇನೆ ಬಳಸುವ ಸಾಧ್ಯತೆ ಇದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾಸುದ್ದೀನ್ ಒವೈಸಿ ಸಂಶಯ ವ್ಯಕ್ತಪಡಿಸಿದ್ದಾರೆ. ಶಾಹೀನ್ ಬಾಗ್ನಿಂದ ಪ್ರತಿಭಟನಕಾರರನ್ನು ಫೆ. 8ರ ಬಳಿಕ ತೆರವುಗೊಳಿಸುವ ಯಾವುದಾದರೂ ಸೂಚನೆಯನ್ನು ಕೇಂದ್ರ ಸರಕಾರ ನೀಡಿದೆಯೇ ಎಂಬ ಸುದ್ದಿ ಸಂಸ್ಥೆಯೊಂದರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು. ‘‘ಅವರು ಪ್ರತಿಭಟನಕಾರರ ಮೇಲೆ ಗುಂಡು ಹಾರಿಸುವ ಸಾಧ್ಯತೆ ಇದೆ. ಶಾಹೀನ್ ಬಾಗ್ ಜಲಿಯನ್ ವಾಲಾಬಾಗ್ ಆಗಿ ಪರಿವರ್ತನೆಯಾಗಲಿದೆ. ದೇಶದ್ರೋಹಿಗಳ ಮೇಲೆ ಗುಂಡು ಹಾರಿಸಲಾಗುವುದು ಎಂದು ಈಗಾಗಲೇ ಬಿಜೆಪಿ ಸಚಿವರೊಬ್ಬರು ಹೇಳಿಕೆ ಕೂಡ ನೀಡಿದ್ದಾರೆ’’ ಎಂದು ಅವರು ತಿಳಿಸಿದರು.
2024ರ ವರೆಗೆ ಎನ್ಆರ್ಸಿ ಅನುಷ್ಠಾನಗೊಳಿಸುವುದಿಲ್ಲ ಎಂಬುದನ್ನು ಕೇಂದ್ರ ಸರಕಾರ ಸ್ಪಷ್ಟವಾಗಿ ಹೇಳಬೇಕು. ಎನ್ಪಿಆರ್ಗಾಗಿ ಅವರು 3900 ಕೋಟಿ ರೂಪಾಯಿಯನ್ನು ವೆಚ್ಚ ಮಾಡುತ್ತಿರುವುದು ಯಾಕೆ ? ನಾನು ಈ ರೀತಿ ಯೋಚಿಸುತ್ತೇನೆ. ಯಾಕೆಂದರೆ ನಾನು ಇತಿಹಾಸದ ವಿದ್ಯಾರ್ಥಿ. ಹಿಟ್ಲರ್ ತನ್ನ ಆಡಳಿತದ ಸಂದರ್ಭ ಎರಡು ಬಾರಿ ಸಮೀಕ್ಷೆ ನಡೆಸಿದ್ದನಂತೆ. ಅನಂತರ ಆತ ಜ್ಯೂಗಳನ್ನು ಗ್ಯಾಸ್ ಚೇಂಬರ್ಗೆ ದೂಡಿದನಂತೆ. ನನ್ನ ದೇಶ ಈ ದಿಶೆಯಲ್ಲಿ ಸಾಗುವುದು ನನಗೆ ಇಷ್ಟ ಇಲ್ಲ ಎಂದು ಒವೈಸಿ ಹೇಳಿದರು.