'ಭಾರತದ ಆತ್ಮವನ್ನು ರಕ್ಷಿಸಲು ಎದ್ದು ನಿಂತ ದಿಲ್ಲಿಗೆ ಧನ್ಯವಾದ': ಪ್ರಶಾಂತ್ ಕಿಶೋರ್ ಟ್ವೀಟ್
ಹೊಸದಿಲ್ಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಭಾರೀ ವಿಜಯದತ್ತ ದಾಪುಗಾಲು ಹಾಕುತ್ತಿದ್ದಂತೆಯೇ ಆಪ್ ಅಭಿಯಾನವನ್ನು ರೂಪಿಸಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿ 'ಭಾರತದ ಆತ್ಮವನ್ನು ರಕ್ಷಿಸಲು ಎದ್ದು ನಿಂತಿದ್ದಕ್ಕೆ ಥ್ಯಾಂಕ್ಯೂ ದಿಲ್ಲಿ' ಎಂದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ತಮ್ಮ ಅಸಮಾಧಾನವನ್ನು ಈಗಾಗಲೇ ಹಲವಾರು ಬಾರಿ ಹೊರಗೆಡಹಿರುವ ಪ್ರಶಾಂತ್ ಕಿಶೋರ್ ಅವರನ್ನು ಜೆಡಿಯುವಿನಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇತ್ತೀಚೆಗಷ್ಟೇ ಕೈಬಿಟ್ಟಿದ್ದರು.
ಹಲವಾರು ವಿಪಕ್ಷ ನಾಯಕರು ಕೂಡ ಆಮ್ ಆದ್ಮಿ ಪಕ್ಷದ ವಿಜಯಕ್ಕಾಗಿ ಅಭಿನಂದನೆಗಳ ಟ್ವೀಟ್ ಮಾಡಿದ್ದಾರೆ.
"ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಕೇವಲ ಅಭಿವೃದ್ಧಿ ಮಾತ್ರ ಕೆಲಸ ಮಾಡುವುದು, ಸಿಎಎ, ಎನ್ಆರ್ ಸಿ ಹಾಗೂ ಎನ್ ಪಿಆರ್ ಇವುಗಳನ್ನು ತಿರಸ್ಕರಿಸಲಾಗುವುದು'' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
``ಇಂದಿನ ದ್ವೇಷದ ಹಾಗೂ ವಿಭಜನಾತ್ಮಕ ವಾತಾವರಣದಲ್ಲಿ ಜನರಿಗೆ ಸ್ಥಿರ ಹಾಗೂ ಅನುಕಂಪ ಹೊಂದಿದ ಸರಕಾರ ಬೇಕೆಂದು ಫಲಿತಾಂಶ ತೋರಿಸಿದೆ. ದಿಲ್ಲಿ ಜನರಿಗಾಗಿ ಆಪ್ ಕೆಲಸ ಮಾಡಿದೆ. ಆ ಕೆಲಸವೇ ಇಂದು ಮಾತನಾಡಿದೆ. ಎಲ್ಲಾ ವಿಜೇತರಿಗೆ ಅಭಿನಂದನೆಗಳು" ಎಂದು ಕಾಂಗ್ರೆಸ್ ನಾಯಕಿ ಪ್ರಿಯಾ ದತ್ತ್ ಹೇಳಿದ್ದಾರೆ.