ಸಾಮಾಜಿಕ ಮಾದ್ಯಮಗಳಲ್ಲಿ ನಕಲಿ ಸುದ್ದಿ ಅಳಿಸುವ ಕುರಿತ ನಿಲುವು ತಿಳಿಸುವಂತೆ ಕೇಂದ್ರಕ್ಕೆ ದಿಲ್ಲಿ ಹೈಕೋರ್ಟ್ ಸೂಚನೆ
ಹೊಸದಿಲ್ಲಿ,, ಮಾ. 11: ಸಾಮಾಜಿಕ ಮಾಧ್ಯಮ ಹಾಗೂ ಫೇಸ್ಬುಕ್, ಟ್ವಿಟ್ಟರ್ ಹಾಗೂ ಗೂಗಲ್ನಂತಹ ಆನ್ಲೈನ್ ವೇದಿಕೆಗಳಲ್ಲಿನ ನಕಲಿ ಸುದ್ದಿ ಹಾಗೂ ದ್ವೇಷ ಭಾಷಣವನ್ನು ತೆಗೆಯುವಂತೆ ಕೋರಿ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಆರೆಸ್ಸೆಸ್ನ ಮಾಜಿ ಚಿಂತಕ ಎನ್. ಗೋವಿಂದಾಚಾರ್ಯ ಸಲ್ಲಿಸಿದ ಮನವಿ ಕುರಿತ ತಮ್ಮ ನಿಲುವು ತಿಳಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನು ಒಳಗೊಂಡ ಪೀಠ ಗೃಹ ಸಚಿವಾಲಯ ಹಾಗೂ ಹಣಕಾಸು ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ, ಮೂರು ಆನ್ಲೈನ್ ವೇದಿಕೆಗೆ ನೋಟಿಸು ಜಾರಿ ಮಾಡಿದೆ.
ಈ ಪ್ರಕರಣವನ್ನು ಎಪ್ರಿಲ್ 14ರಂದು ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ. ಭಾರತದಲ್ಲಿರುವ ತಮ್ಮ ನಿಯೋಜಿತ ಅಧಿಕಾರಿಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಈ ಮೂರು ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಕೂಡ ಗೋವಿಂದಾಚಾರ್ಯ ಅವರನ್ನು ಪ್ರತಿನಿಧಿಸಿದ ನ್ಯಾಯವಾದಿ ವಿರಾಗ್ ಗುಪ್ತಾ ಮನವಿ ಮಾಡಿದ್ದಾರೆ. ಸಾಮಾಜಿಕ ಮಾದ್ಯಮ ವೇದಿಕೆಗಳು ದ್ವೇಷ ಭಾಷಣಕ್ಕೆ ಸ್ವರ್ಗದಂತೆ ಆಗುತ್ತಿದೆ. ನಿಯೋಜಿತ ಅಧಿಕಾರಿಗಳ ವಿವರಗಳು ಇಲ್ಲದೇ ಇರುವುದರಿಂದ ನ್ಯಾಯ ಜಾರಿಗೊಳಿಸಲು ಸ್ಪಷ್ಟ ವ್ಯವಸ್ಥೆ ಇಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.