ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್ ರಿಂದ ಹೊಸ ಪಕ್ಷ
ಫೈಲ್ ಚಿತ್ರ
ಲಕ್ನೊ, ಮಾ.12: ತಾನು ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದು , ದಿಲ್ಲಿಯಲ್ಲಿ ನಡೆಯಲಿರುವ ಬಹುಜನ ಸಮಾಜ ಪಕ್ಷದ ಸ್ಥಾಪಕ ದಿವಂಗತ ಕಾನ್ಶೀರಾಮ್ ಅವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಪಕ್ಷದ ಹೆಸರನ್ನು ಘೋಷಿಸುವುದಾಗಿ ಭೀಮ್ಸೇನೆಯ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಹೇಳಿದ್ದಾರೆ.
ಹೊಸ ಪಕ್ಷದ ಹೆಸರು ಇನ್ನೂ ಅಧಿಕೃತವಾಗಿಲ್ಲ. ಆಝಾದ್ ಬಹುಜನ ಪಕ್ಷ, ಬಹುಜನ ಅವಾಮ್ ಪಕ್ಷ, ಆಝಾದ್ ಬಹುಜನ ಪಕ್ಷ, ಸೇರಿದಂತೆ ಹಲವು ಹೆಸರುಗಳನ್ನು ಕಾರ್ಯಕರ್ತರು ಪ್ರಸ್ತಾವಿಸಿದ್ದಾರೆ. ಚುನಾವಣಾ ಆಯೋಗ ಅನುಮೋದಿಸಿದ ಬಳಿಕ ಹೆಸರನ್ನು ಘೋಷಿಲಾಗುವುದು ಎಂದು ಭೀಮ್ಸೇನೆಯ ವಕ್ತಾರರು ಹೇಳಿದ್ದಾರೆ.
ರವಿವಾರ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ವಿದ್ಯಾರ್ಥಿಗಳನ್ನು ಪಕ್ಷದತ್ತ ಆಕರ್ಷಿಸಲು ಪಕ್ಷದ ವಿದ್ಯಾರ್ಥಿ ವಿಭಾಗ ‘ಭೀಮ್ ಸೇನೆ ವಿದ್ಯಾರ್ಥಿ ಫೆಡರೇಶನ್’ ಈಗಾಗಲೇ ಆರಂಭಿಸಲಾಗಿದೆ. ಹೊಸ ಪಕ್ಷದ ಆರಂಭದ ಬಳಿಕ ಭೀಮ್ಸೇನೆಯು ಪಕ್ಷದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿ ಮುಂದುವರಿಯಲಿದೆ ಎಂದು ವಕ್ತಾರರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಚಂದ್ರಶೇಖರ್ ಆಝಾದ್ ಈಗಾಗಲೇ ಅಭಿಯಾನವನ್ನು ಆರಂಭಿಸಿದ್ದು ಪಕ್ಷವನ್ನು ಸೇರಿ ಬೆಂಬಲಿಸುವಂತೆ ದಲಿತರಿಗೆ, ಹಿಂದುಳಿದ ವರ್ಗದವರಿಗೆ ಮತ್ತು ಮುಸ್ಲಿಮರಿಗೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಹೊಸ ಪಕ್ಷವು ಉತ್ತರಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷದ ಮತಬ್ಯಾಂಕ್ ಅನ್ನು ಕೈವಶ ಮಾಡಿಕೊಳ್ಳಲಿದೆ ಎಂದು ಆಝಾದ್ ಹೇಳಿದ್ದಾರೆ.