‘ಅತ್ಯಾಚಾರಿಯ ವಿಧವೆ’ ಹಣೆಪಟ್ಟಿ ಬೇಕಿಲ್ಲ,ನನಗೆ ವಿಚ್ಛೇದನ ಕೊಡಿಸಿ: ಕೋರ್ಟ್ ಮೆಟ್ಟಲೇರಿದ ದೋಷಿ ಠಾಕೂರ್ ಪತ್ನಿ
ನಿರ್ಭಯಾ ಅತ್ಯಾಚಾರ ಪ್ರಕರಣ
ಔರಂಗಾಬಾದ್(ಬಿಹಾರ),ಮಾ.18: ಶುಕ್ರವಾರ ಗಲ್ಲುಗಂಬವನ್ನೇರಲಿರುವ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಲ್ಲೋರ್ವನಾಗಿರುವ ಅಕ್ಷಯ್ ಠಾಕೂರ್ನ ಪತ್ನಿ ಪತಿಯಿಂದ ವಿಚ್ಛೇದನ ಕೋರಿ ಮಂಗಳವಾರ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾಳೆ. ‘ಅತ್ಯಾಚಾರಿಯ ವಿಧವೆ ’ಎಂಬ ಹಣೆಪಟ್ಟಿಯೊಂದಿಗೆ ಬದುಕಲು ತನಗೆ ಇಷ್ಟವಿಲ್ಲ ಎಂದು ಆಕೆ ಅರ್ಜಿಯಲ್ಲಿ ಹೇಳಿಕೊಂಡಿದ್ದಾಳೆ. ಈ ವಿಚ್ಛೇದನ ಅರ್ಜಿಯು ದೋಷಿಗಳು ನೇಣಿಗೇರುವುದನ್ನು ವಿಳಂಬಿಸಲು ಇನ್ನೊಂದು ತಂತ್ರವಾಗಿರಬಹುದು ಎಂಬ ಊಹಾಪೋಹಗಳು ದಟ್ಟವಾಗಿವೆ.
ಔರಂಗಾಬಾದ್ ಜಿಲ್ಲೆಯ ನಬಿನಗರ ಬ್ಲಾಕ್ ನಿವಾಸಿಯಾಗಿರುವ ಪುನೀತಾ ದೇವಿ ಸಲ್ಲಿಸಿರುವ ಅರ್ಜಿಯು ಗುರುವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ತನ್ನ ಗಂಡನ ಮೇಲೆ ಲೈಂಗಿಕ ಅಪರಾಧದ ಆರೋಪವಿರುವ ಕಾರಣವನ್ನು ನೀಡಿ ಮಹಿಳೆಯು ವಿಚ್ಛೇದನ ಕೋರಲು ಕಾನೂನಿನಲ್ಲಿ ಅವಕಾಶವಿದೆ ಎಂದು ಪುನೀತಾ ದೇವಿ ಪರ ವಕೀಲರು ಸುದ್ದಿಗಾರರಿಗೆ ತಿಳಿಸಿದರು.
ತನ್ನ ಗಂಡ ಅಮಾಯಕನಾಗಿದ್ದಾನೆ ಮತ್ತು ಆತನ ಮೇಲೆ ಅತ್ಯಾಚಾರದ ತಪ್ಪು ಆರೋಪವನ್ನು ಹೊರಿಸಲಾಗಿದೆ ಎಂದು ಠಾಕೂರ್ನ ಪತ್ನಿ ಇತ್ತೀಚಿನವರೆಗೂ ಪ್ರತಿಪಾದಿಸುತ್ತ ಬಂದಿದ್ದಳು.