'ಲಾಕ್ ಡೌನ್' ಬೆಂಬಲಿಸಿ ಪ್ರಧಾನಿಗೆ ಪತ್ರ ಬರೆದ ಸೋನಿಯಾ ಹೇಳಿದ್ದೇನು?
ಹೊಸದಿಲ್ಲಿ: ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಅನ್ನು ಬೆಂಬಲಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.
"ಈ ಸವಾಲುಭರಿತ ಹಾಗೂ ಅನಿಶ್ಚಿತತೆಯ ಸಂದರ್ಭದಲ್ಲಿ ನಾವೆಲ್ಲರೂ ಎಲ್ಲಾ ವಿಚಾರಗಳನ್ನೂ ಮರೆತು ದೇಶದ ಕಡೆಗೆ ಹಾಗೂ ಮಾನವ ಕುಲದ ಕಡೆಗೆ ನಮ್ಮ ಕರ್ತವ್ಯದತ್ತ ಹೆಜ್ಜೆಯಿಡುವುದು ಅನಿವಾರ್ಯವಾಗಿದೆ'' ಎಂದು ತಮ್ಮ ನಾಲ್ಕು ಪುಟಗಳ ಪತ್ರದಲ್ಲಿ ತಿಳಿಸಿರುವ ಸೋನಿಯಾ, ತಮ್ಮ ಪಕ್ಷ ಸರಕಾರದ ಕಾರ್ಯಕ್ಕೆ ಸರ್ವ ರೀತಿಯಲ್ಲಿ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಹೇಳಿದ್ದಾರೆ.
ಸಾಲಗಳ ಮೇಲಿನ ಇಎಂಐ ಆರು ತಿಂಗಳುಗಳಿಗೆ ಮುಂದೂಡುವಂತೆ ಹಾಗೂ ಈ ಅವಧಿಯಲ್ಲಿನ ಬಡ್ಡಿಯನ್ನು ಕೂಡ ಮನ್ನಾ ಮಾಡುವಂತೆ ಅವರು ಸರಕಾರಕ್ಕೆ ಸಲಹೆ ನೀಡಿದ್ದಾರೆ.
ತಮ್ಮ ಪಕ್ಷ ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದ ಕನಿಷ್ಠ ಆದಾಯ ಬೆಂಬಲ ಒದಗಿಸುವ ನ್ಯಾಯ್ ಯೋಜನೆ ಜಾರಿ ಈಗಿನ ಅಗತ್ಯವಾಗಿದೆ ಎಂದೂ ಆಕೆ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಪ್ರತಿ ರೇಷನ್ ಕಾರ್ಡ್ದಾರರಿಗೆ ತಿಂಗಳಿಗೆ ಹತ್ತು ಕೆಜಿ ಗೋಧಿ ಅಥವಾ ಅಕ್ಕಿ ಉಚಿತವಾಗಿ ನೀಡಬೇಕೆಂಬ ಸಲಹೆಯೂ ಸೋನಿಯಾ ಅವರಿಂದ ಬಂದಿದೆ.