ದೇಶಾದ್ಯಂತ ವಿದ್ಯುತ್ ದೀಪಗಳು ಆರಿಸಿದರೆ ಪವರ್ ಗ್ರಿಡ್ ಗಳಿಗೆ ಹಾನಿ ಎಂಬ ಆತಂಕ: ಇಂಧನ ಸಚಿವಾಲಯ ಹೇಳಿದ್ದು ಹೀಗೆ…
ಹೊಸದಿಲ್ಲಿ, ಎ.4: ಎಪ್ರಿಲ್ 5ರಂದು (ರವಿವಾರ) ರಾತ್ರಿ 9 ಗಂಟೆಗೆ ದೀಪಗಳನ್ನು ಆರಿಸಿ ಎಂಬ ಪ್ರಧಾನಿ ಮೋದಿಯ ಸಂದೇಶದ ಪಾಲನೆಯಿಂದ ಪವರ್ ಗ್ರಿಡ್ ವ್ಯವಸ್ಥೆಗೆ ಹಾನಿಯಾಗುತ್ತದೆ ಎಂಬ ಗ್ರಹಿಕೆ ಹಾಗೂ ಆತಂಕ ಸರಿಯಲ್ಲ ಮತ್ತು ಬೇಡಿಕೆಯ ಏರಿಳಿತವನ್ನು ನಿಭಾಯಿಸಲು ಸೂಕ್ತ ಶಿಷ್ಟಾಚಾರವಿದ್ದು ಸಾಕಷ್ಟು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಇಂಧನ ಇಲಾಖೆ ಸ್ಪಷ್ಟಪಡಿಸಿದೆ.
ಒಂದೇ ಬಾರಿಗೆ ದೀಪಗಳನ್ನು ಆರಿಸುವುದರಿಂದ ಗರಿಷ್ಟ ವಿದ್ಯುತ್ ಬೇಡಿಕೆಯಲ್ಲಿ ಏಕಾಏಕಿ ಕುಸಿತವಾಗಿ (ಕಳೆದ ವರ್ಷದ ಎಪ್ರಿಲ್ 2ಕ್ಕೆ ಹೋಲಿಸಿದರೆ ಈಗಾಗಲೇ 25% ಕುಸಿದಿದೆ) ಪವರ್ಗ್ರಿಡ್ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಇಂಧನ ಇಲಾಖೆ, ಈ ಆತಂಕ ಮತ್ತು ಗ್ರಹಿಕೆ ಸರಿಯಲ್ಲ ಎಂದು ತಿಳಿಸಿದೆ.
ದೇಶದ ಪವರ್ಗ್ರಿಡ್ ಸ್ಥಿರ ಮತ್ತು ಸುದೃಢವಾಗಿದೆ. ಮನೆಯ ದೀಪಗಳನ್ನು ಮಾತ್ರ ಆರಿಸುವಂತೆ ಪ್ರಧಾನಿ ಕರೆ ನೀಡಿದ್ದಾರೆ. ಬೀದಿ ದೀಪ, ಕಂಪ್ಯೂಟರ್, ಟಿವಿ, ಫ್ಯಾನ್, ಫ್ರಿಜ್ಗಳು ಅಥವಾ ಎಸಿಗಳನ್ನು ಬಂದ್ ಮಾಡಬೇಕಿಲ್ಲ. ಅಲ್ಲದೆ ಆಸ್ಪತ್ರೆಗಳು, ಪುರಸಭೆ ಸೇವೆಗಳ ಕಚೇರಿ, ಪೊಲೀಸ್ ಠಾಣೆಗಳು, ಕಚೇರಿಗಳು, ಉತ್ಪಾದನಾ ಘಟಕಗಳಂತಹ ಅಗತ್ಯ ಸೇವೆಗಳು ಎಂದಿನಂತೆಯೇ ಕಾರ್ಯ ನಿರ್ವಹಿಸಲಿದೆ. ಜನರ ಭದ್ರತೆಯ ದೃಷ್ಟಿಯಿಂದ ಬೀದಿದೀಪಗಳನ್ನು ಆರಿಸಬಾರದು ಎಂದು ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಈ ಮಧ್ಯೆ, ವಿದ್ಯುತ್ಚಕ್ತಿಯ ಬೇಡಿಕೆಯಲ್ಲಿ ಏಕಾಏಕಿ ಕುಸಿತವಾಗುವ ಸಾಧ್ಯತೆಯಿದ್ದು ಪರಿಸ್ಥಿತಿಯನ್ನು ಸಮಪರ್ಕವಾಗಿ ನಿಭಾಯಿಸಲು ಸರಣಿ ಕ್ರಮಗಳನ್ನು ಕೈಗೊಳ್ಳುವಂತೆ ಉತ್ತರಪ್ರದೇಶದ ‘ಸ್ಟೇಟ್ ಲೋಡ್ ಡಿಸ್ ಪ್ಯಾಚ್ ಸೆಂಟರ್’ ಎಲ್ಲಾ ಘಟಕಗಳಿಗೆ ಸೂಚಿಸಿದೆ. ಅಲ್ಲದೆ ರವಿವಾರ ರಾತ್ರಿ 8ಗಂಟೆಯಿಂದ 9 ಗಂಟೆಯವರೆಗೆ ಲೋಡ್ಶೆಡ್ಡಿಂಗ್ ಆರಂಭಿಸುವಂತೆ ತಿಳಿಸಿದೆ. ತಮಿಳುನಾಡು ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಕೂಡಾ ತನ್ನ ಕಾರ್ಯಾಚರಣೆ ವಿಭಾಗಕ್ಕೆ ಸೂಚಿಸಿದೆ.
ದೀಪ ಆರಿಸುವ ಕಾರ್ಯಕ್ರಮದ ಕಾರಣ ರವಿವಾರ ವಿದ್ಯುಚ್ಛಕ್ತಿಯ ಬೇಡಿಕೆಯಲ್ಲಿ 10 ಜಿಡಬ್ಲು(ಗಿಗಾವ್ಯಾಟ್)ನಿಂದ 12 ಜಿಡಬ್ಲುನಷ್ಟು ಕುಸಿತವಾಗಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ದೇಶದಾದ್ಯಂತ ‘ಬ್ಲಾಕ್ಔಟ್’ ವಿದ್ಯಮಾನ ನಡೆಯುತ್ತಿರುವುದು ಇದೇ ಮೊದಲ ಬಾರಿಯಲ್ಲ ಮತ್ತು ಇದರಿಂದ ಪವರ್ಗ್ರಿಡ್ಗೆ ಹಾನಿಯಾಗುವುದಿಲ್ಲ. ಈ ಹಿಂದೆ ‘ಅರ್ಥ್ ಅವರ್’ ಸಂದರ್ಭದಲ್ಲೂ ಹೀಗೆ ನಡೆದಿದೆ. ನ್ಯಾಷನಲ್ ಲೋಡ್ ಡಿಸ್ಪಾಚ್ ಸೆಂಟರ್ ಮತ್ತು ಸ್ಟೇಟ್ ಲೋಡ್ ಡಿಸ್ಪಾಚ್ ಸೆಂಟರ್ಗಳು ಕಳುಹಿಸಿರುವ ಸೂಚನೆಗಳು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳಾಗಿವೆ ಎಂದವರು ಹೇಳಿದ್ದಾರೆ.