ಲಾಕ್ ಡೌನ್ ವೇಳೆ ವಿಮಾನದಲ್ಲಿ ಪ್ರಯಾಣಿಸಿದ್ದರೇ ಪ್ರಶಾಂತ್ ಕಿಶೋರ್?: ತನಿಖೆ ಆರಂಭಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಲಾಕ್ ಡೌನ್ ನಿಯಮಾವಳಿ ಉಲ್ಲಂಘಿಸಿ ಸರಕು ಸಾಗಾಣಿಕೆ ವಿಮಾನದಲ್ಲಿ ಕೊಲ್ಕತ್ತಾಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೊರೋನಾ ವೈರಸ್ ಸ್ಥಿತಿಯನ್ನು ರಾಜ್ಯದಲ್ಲಿ ನಿಭಾಯಿಸುವ ಸಂಬಂಧ ಕ್ರಮಗಳನ್ನು ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರದ ಜತೆಗಿನ ಮುಸುಕಿನ ಗುದ್ದಾಟದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರಶಾಂತ್ ಕಿಶೋರ್ ಅವರಿಗೆ ಬುಲಾವ್ ಕಳುಹಿಸಿದ್ದರು ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ತನಿಖೆ ಆರಂಭಿಸಲಾಗಿದೆ.
“ಆರೋಪದ ಬಗ್ಗೆ ತನಿಖೆ ಆರಂಭಿಸಿ ಕಿಶೋರ್ ಅವರು ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ವಿಮಾನಯಾನ ಕೈಗೊಳ್ಳಲು ಪ್ರಯತ್ನಿಸಿದ್ದರೇ ಎಂಬ ಬಗ್ಗೆ ವಿಮಾನ ನಿಲ್ದಾಣಗಳನ್ನು ಕೇಳಲಾಗಿದೆ”ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಲ್ಕತ್ತಾಗೆ ವಿಮಾನದಲ್ಲಿ ಪ್ರಯಾಣಿಸಿದ ಬಗೆಗಿನ ವರದಿಗಳು ಸುಳ್ಳು ಎಂದು ಪ್ರಶಾಂತ್ ಕಿಶೋರ್ ಪ್ರತಿಕ್ರಿಯಿಸಿದ್ದಾರೆ. ಮಾರ್ಚ್ 19ರ ಬಳಿಕ ಯಾವ ವಿಮಾನ ನಿಲ್ದಾಣಗಳಿಗೂ ತೆರಳಿರಲಿಲ್ಲ. ಈ ಮಾಹಿತಿಗೆ ವಿರುದ್ಧವಾದ ಮಾಹಿತಿ ಯಾರ ಬಳಿಯಲ್ಲಾದರೂ ಇದ್ದರೆ ಬಹಿರಂಗಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.