ಲಾಕ್ ಡೌನ್ : ಆಹಾರ ಹಂಚಲು ಹೋದ ಯುವಕನಿಗೆ ಭಿಕ್ಷೆ ಬೇಡುತ್ತಿದ್ದ ಯುವತಿ ಜೊತೆ ಪ್ರೀತಿ, ಮದುವೆ
ಕಾನ್ಪುರ, ಮೇ 23: ಮೊದಲೇ ನಿಗದಿಯಾಗಿದ್ದ ಮದುವೆಯನ್ನು ಲಾಕ್ ಡೌನ್ ನಡುವೆಯೂ ಹೇಗೋ ಮಾಡಿ ಮುಗಿಸಿದ ಹಲವು ಉದಾಹರಣೆಗಳನ್ನು ನೀವು ನೋಡಿದ್ದೀರಿ. ಇದು ಅದಕ್ಕಿಂತ ಸಂಪೂರ್ಣ ಭಿನ್ನ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೊರೋನ ಲಾಕ್ ಡೌನ್ ನಿಂದಾಗಿಯೇ ಒಂದು ಪ್ರೇಮ ಪ್ರಕರಣ ದಾಖಲಾಗಿದೆ ಮತ್ತು ಅದು ಮದುವೆಯೊಂದಿಗೆ ಸುಖಾಂತ್ಯ ಕಂಡಿದೆ.
ನೀಲಂ ಎಂಬ ಯುವತಿ ತನ್ನ ತಂದೆ ತಾಯಿ ನಿಧನರಾದ ಬಳಿಕ ಅಣ್ಣ ಹಾಗೂ ಅತ್ತಿಗೆ ಜೊತೆ ವಾಸಿಸುತ್ತಿದ್ದಳು. ಆದರೆ ಅಣ್ಣ, ಅತ್ತಿಗೆ ಆಕೆಯನ್ನು ಮನೆಯಿಂದ ಹೊರದೂಡಿಬಿಟ್ಟಿದ್ದರು. ಅದರಿಂದಾಗಿ ಕಾನ್ಪುರದ ಕಾಕದೇವ್ ಪ್ರದೇಶದಲ್ಲಿ ಭಿಕ್ಷುಕರೊಂದಿಗೆ ವಾಸಿಸುತ್ತಿದ್ದಳು. ಆದರೆ ಲಾಕ್ ಡೌನ್ ಆದ ಮೇಲೆ ಹಸಿವು ತಣಿಸಲು ಆಹಾರವೂ ಸಿಗದೇ ಕಂಗಾಲಾಗಿದ್ದಳು.
ಈ ಭಿಕ್ಷುಕರಿಗೆ ಪ್ರತಿದಿನ ಆಹಾರ ತಲುಪಿಸುವಂತೆ ಸ್ಥಳೀಯ ಉದ್ಯಮಿ ಲಾಲತ ಪ್ರಸಾದ್ ಅವರು ತನ್ನ ಚಾಲಕ ಅನಿಲ್ ಗೆ ಸೂಚಿಸಿದ್ದರು. ಹಾಗೆ ಕಳೆದ 45 ದಿನಗಳಿಂದ ಪ್ರತಿದಿನ ಅನಿಲ್ ಈ ಭಿಕ್ಷುಕರ ಗುಂಪಿಗೆ ಆಹಾರ ತಲುಪಿಸುತ್ತಿದ್ದರು. ಪ್ರತಿದಿನದ ಭೇಟಿ ಅನಿಲ್ - ಹಾಗು ನೀಲಂ ನಡುವೆ ಪ್ರೇಮಾಂಕುರಕ್ಕೆ ಕಾರಣವಾಗಿದೆ.
ಅನಿಲ್ ತಂದೆಗೆ ವಿಷಯ ತಿಳಿಯುತ್ತಲೇ ಕಾರ್ಯಪ್ರವೃತ್ತರಾದ ಅವರು ನೀಲಂ ಜೊತೆ ಮಾತನಾಡಿ ಒಪ್ಪಿಗೆ ಪಡೆದು ವಿವಾಹ ಮಾಡಿಯೇ ಬಿಟ್ಟರು.