ಬಿಜೆಪಿ ಕಾರ್ಯಕರ್ತನ ದೂರು: ಜೆಎನ್ ಯು ಸಂಶೋಧನಾ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ: ಜವಾಹರಲಾಲ್ ನೆಹರೂ ವಿವಿಯ ಸಂಶೋಧನಾ ವಿದ್ಯಾರ್ಥಿ, ಭಾರತೀಯ ಸೇನೆಯ ಬಗ್ಗೆ ಅವಮಾನಕಾರಿ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರೊಬ್ಬರು ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ,
ತೇಜೇಂದರ್ ಯಾದವ್ ಎಂಬುವವರು ಜುಲೈ 8ರಂದು ಈ ಬಗ್ಗೆ ದೂರು ನೀಡಿದ್ದರು. “ಜೆಎನ್ಯು ವಿದ್ಯಾರ್ಥಿ ಮಾಡಿದ ಟ್ವೀಟ್ ನಲ್ಲಿ, ಕಾಶ್ಮೀರ ಭಯೋತ್ಪಾದಕರ ವಿರುದ್ಧ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯನ್ನು ತಪ್ಪು ಹಾಗೂ ದೇಶವಿರೋಧಿ ಎಂದು ಬಣ್ಣಿಸಿದ್ದರು”ಎಂದು ದೂರಲಾಗಿತ್ತು.
ಸಾಜಿದ್ ಬಿನ್ ಸೈಯದ್ ಈ ಟ್ವೀಟನ್ನು ಬಳಿಕ ಅಳಿಸಿ ಹಾಕಿದ್ದಾರೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿದ್ದವು.
“ಆರೆಸ್ಸೆಸ್ ತತ್ವದಂತೆ ಭಾರತೀಯ ಸೇನೆ ಕಾಶ್ಮೀರದಲ್ಲಿ ವ್ಯವಸ್ಥಿತ ಜನಾಂಗೀಯ ಹತ್ಯೆ ಮಾಡುತ್ತಿದೆ. ಬಿಜೆಪಿ ಸರ್ಕಾರ ತಮ್ಮ ಪ್ರಾಂತೀಯ ದುರಾಸೆಯನ್ನು ಬಿಟ್ಟು, ವಿಶ್ವಸಂಸ್ಥೆ ಖಾತರಿಪಡಿಸಿದ ಕಾಶ್ಮೀರಿಗಳ ಸ್ವಯಂ ಬದ್ಧತೆಯ ಹಕ್ಕನ್ನು ಒಪ್ಪಿಕೊಳ್ಳಬೇಕು. ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಮಧ್ಯಪ್ರವೇಶಿಸಲು ಇದು ಸಕಾಲ” ಎಂದು ಸಾಜೀದ್ ಟ್ವೀಟ್ ಮಾಡಿದ್ದರು ಎಂದು ಆರೋಪಿಸಲಾಗಿದೆ.