ಅಯೋಧ್ಯೆ: ಶ್ರೀ ರಾಮನ ಬೃಹತ್ ಪ್ರತಿಮೆಗಾಗಿ ಭೂಸ್ವಾಧೀನಕ್ಕೆ ಗ್ರಾಮಸ್ಥರ ವಿರೋಧ
ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮ ಮಂದಿರಕ್ಕೆ ಪೂರಕವಾಗಿ ನಗರದಲ್ಲಿ 251 ಮೀಟರ್ ಎತ್ತರದ ಬೃಹತ್ ಶ್ರೀ ರಾಮನ ಪ್ರತಿಮೆಯೂ ತಲೆಯೆತ್ತಲಿದೆ. ಆದರೆ ಈ ಮೂರ್ತಿ ಯೋಜನೆಗಾಗಿ ಬರ್ಹಾತ ಗ್ರಾಮದಲ್ಲಿ 85 ಎಕರೆ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದಂದಿನಿಂದ ಗ್ರಾಮದ ಜನರು ತಮ್ಮ ಭೂಮಿ ಬಿಟ್ಟು ಕೊಡಲು ಆಕ್ಷೇಪ ಸೂಚಿಸುತ್ತಿದ್ದಾರೆ ಎಂದು thequint.com ವರದಿ ಮಾಡಿದೆ.
ಈ ಗ್ರಾಮದಲ್ಲಿ ಸುಮಾರು 350 ಕುಟುಂಬಗಳ 1,500 ಜನರು ವಾಸಿಸುತ್ತಿದ್ದಾರೆ. ಇದೀಗ ಎಲ್ಲಿ ತಮ್ಮ ಜಮೀನು ಬಿಟ್ಟು ಕೊಡಬೇಕಾಗಬಹುದೇನೋ ಎಂಬ ಭಯ ಅವರನ್ನು ಕಾಡುತ್ತಿದೆ. ಹೆಚ್ಚಿನವರು ಕೃಷಿಕರಾಗಿದ್ದು ಅಯೋಧ್ಯೆ ಬಿಟ್ಟು ತೆರಳುವ ಬದಲು ಸಾಯುವುದೇ ಮೇಲು ಎಂದು ಹಲವರು ಹೇಳುತ್ತಿದ್ದಾರೆ.
ಸಿಪಿಐ ಪಕ್ಷ ಕೂಡ ಗ್ರಾಮಸ್ಥರ ಪರ ನಿಂತಿದ್ದು, ಪ್ರತಿಮೆ ನಿರ್ಮಾಣಕ್ಕೆ ಬೇರೆ ಸ್ಥಳ ಆಯ್ದುಕೊಳ್ಳಬೇಕೆಂದು ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿದ ಅಯೋಧ್ಯೆಯ ಮೇಯರ್ ಹೃಷಿಕೇಶ್ ಉಪಾಧ್ಯಾಯ, ಜಮೀನು ಕಳೆದುಕೊಂಡವರಿಗೆ ಪುರ್ನವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರಲ್ಲದೆ ಸದ್ಯ ಎಲ್ಲರೂ ಆಗಸ್ಟ್ 5ರ ರಾಮ ಮಂದಿರ ಭೂಮಿ ಪೂಜೆ ಸಮಾರಂಭದ ತಯಾರಿಯಲ್ಲಿ ವ್ಯಸ್ತರಾಗಿದ್ದಾರೆ ಎಂದರು.