ರಾಷ್ಟ್ರಕ್ಕೆ ಯಾವುದೇ ಧರ್ಮ ಇಲ್ಲ: ಅಯೋಧ್ಯೆ ಕಾರ್ಯಕ್ರಮದ ಬಗ್ಗೆ ಸೀತಾರಾಮ ಯೆಚೂರಿ
ಹೊಸದಿಲ್ಲಿ, ಆ. 6: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಆಗಸ್ಟ್ 5ರಂದು ಶಿಲಾನ್ಯಾಸ ನಡೆಸಿರುವುದನ್ನು ಸಿಪಿಎಂನ ಪ್ರಧಾನ ಕಾರ್ಯದರ್ಶಿ ಹಾಗೂ ಪಾಲಿಟ್ ಬ್ಯೂರೊ ಸದಸ್ಯ ಸೀತಾರಾಮ ಯೆಚೂರಿ ಟೀಕಿಸಿದ್ದಾರೆ.
ಕೊರೋನ ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಇಂತಹ ದೊಡ್ಡ ಕಾರ್ಯಕ್ರಮ ನಡೆಸಿರುವ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ದೇವಾಲಯ ನಿರ್ಮಾಣದ ಉಸ್ತುವಾರಿಯನ್ನು ಟ್ರಸ್ಟ್ ವಹಿಸಿಕೊಳ್ಳಬೇಕು ಎಂಬ ಸುಪ್ರೀಂ ಕೋರ್ಟ್ನ ತೀರ್ಪಿನಲ್ಲಿ ಹೇಳಲಾದ ನಿರ್ದೇಶನದ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ. ಪ್ರತಿಯೊಬ್ಬ ನಾಗರಿಕನೂ ತಮ್ಮ ನಂಬಿಕೆಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ನಮ್ಮ ಕಾನೂನು ರಕ್ಷಿಸುತ್ತದೆ ಹಾಗೂ ಭಾರತೀಯ ಸಂವಿಧಾನ ಖಾತರಿ ನೀಡುತ್ತದೆ. ರಾಷ್ಟ್ರಕ್ಕೆ ಯಾವುದೇ ಧರ್ಮ ಇಲ್ಲ ಎಂದು ಅವರು ಹೇಳಿದ್ದಾರೆ.
ಉತ್ತರಪ್ರದೇಶದ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ದೇವಾಲಯದ ನಿರ್ಮಾಣವನ್ನು ಆರಂಭಿಸಿರುವುದು ಭಾರತೀಯ ಗಣರಾಜ್ಯದ ಜಾತ್ಯತೀತ ಪ್ರಜಾಪ್ರಭುತ್ವದ ಸ್ವರೂಪವನ್ನು ನಿರಾಕರಿಸಿದಂತೆ ಎಂದು ಸೀತಾರಾಮ ಯೆಚೂರಿ ತಿಳಿಸಿದ್ದಾರೆ.