ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಮಸೀದಿ ಉದ್ಘಾಟನೆಗೆ 'ಒಬ್ಬ ಯೋಗಿಯಾಗಿ' ಹೋಗುವುದಿಲ್ಲ ಎಂದ ಆದಿತ್ಯನಾಥ್
ಲಕ್ನೋ: ಕಳೆದ ವರ್ಷದ ಸುಪ್ರೀಂ ಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಮಸೀದಿ ಉದ್ಘಾಟನೆಗೆ ತನ್ನನ್ನು ಆಹ್ವಾನಿಸಿದರೆ ಅಲ್ಲಿಗೆ 'ಓರ್ವ ಯೋಗಿ'ಯಾಗಿ ಹಾಗೂ 'ಓರ್ವ ಹಿಂದು' ಆಗಿ ತಾನು ಹೋಗುವುದಿಲ್ಲ ಹಾಗೂ ತಮ್ಮನ್ನು ಯಾರೂ ಆಹ್ವಾನಿಸುವುದಿಲ್ಲ ಎಂದು ತಮಗೆ ಗೊತ್ತು ಎಂದು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಹೇಳಿದ್ದಾರೆ.
"ಒಬ್ಬ ಮುಖ್ಯಮಂತ್ರಿ''ಯಾಗಿ ನನಗೆ ಯಾವುದೇ ಧರ್ಮದ ಕುರಿತು ಯಾವುದೇ ಸಮಸ್ಯೆಯಿಲ್ಲ ಹಾಗೂ ರೋಝಾ ಅಥವಾ ಇಫ್ತಾರ್ ನಲ್ಲಿ ಭಾಗವಹಿಸುವ, ಟೋಪಿ ಧರಿಸುವ ರಾಜಕೀಯ ನಾಯಕರುಗಳು ತಾವು "ಜಾತ್ಯತೀತ'' ಎಂದಷ್ಟೇ ತೋರ್ಪಡಿಸುತ್ತಾರೆ "ಯೇ ಸೆಕ್ಯುಲರಿಸಿಂ ನಹೀ ಹೈ''(ಇದು ಸೆಕ್ಯುಲರಿಸಂ ಅಲ್ಲ,'' ಸಾರ್ವಜನಿಕರಿಗೆ ಇದು ಅರ್ಥವಾಗುತ್ತದೆ, ಎಂದರು.
ರಾಮ ಮಂದಿರ ಭೂಮಿ ಪೂಜೆಯಲ್ಲಿ ಭಾಗವಹಿಸಿದ ನಂತರ ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿದ ಅವರು, "ನೋಡಿ ಒಬ್ಬ ಮುಖ್ಯಮಂತ್ರಿಯಾಗಿ ನನ್ನನ್ನು ನೀವು ಕೇಳಿದರೆ ನಾನು ಯಾವುದೇ ಧರ್ಮ ಯಾ ಪಂಗಡದಿಂದ ದೂರ ಸರಿದು ನಿಲ್ಲುವುದಿಲ್ಲ, ಆದರೆ ನೀವು 'ಯೋಗಿ'ಯಲ್ಲಿ ಕೇಳಿದರೆ ನಾನು ಖಂಡಿತಾ ಹೋಗುವುದಿಲ್ಲ,'' ಎಂದರು. "ನಾನೋರ್ವ ಯೋಗಿಯಾಗಿರುವುದರಿಂದ ನಾನು ಹೋಗುವುದಿಲ್ಲ, ಒಬ್ಬ ಹಿಂದುವಾಗಿ ನನಗೆ ನನ್ನ ಆರಾಧನಾ ಪದ್ಧತಿಯಂತೆ ಬದುಕುವ ಹಕ್ಕಿದೆ.'' ಎಂದು ಹೇಳಿದರು.
ಮಸೀದಿ ನಿರ್ಮಾಣ ವಿಚಾರದಲ್ಲಿ ತನಗೆ ಏನೂ ಮಾಡಲು ಇಲ್ಲ ಎಂದು ಹೇಳಿದ ಅವರು "ಅದೇ ಕಾರಣದಿಂದ ಯಾರೂ ನನ್ನನ್ನು ಅಲ್ಲಿಗೆ ಆಹ್ವಾನಿಸುವುದಿಲ್ಲ, ನನಗೆ ಕೂಡ ಹೋಗಲು ಮನಸ್ಸಿಲ್ಲ, ನನಗೆ ಅಂತಹ ಆಹ್ವಾನ ಕೂಡ ದೊರೆಯುವುದಿಲ್ಲ ಎಂದು ನನಗೆ ಗೊತ್ತು,'' ಎಂದರು.