ಪೊಲೀಸರಿಂದ ಪ್ರೊ. ಅಪೂರ್ವಾನಂದರ ವಿಚಾರಣೆ: ದೇಶಾದ್ಯಂತ ಗಣ್ಯರಿಂದ ಖಂಡನೆ
ಹೊಸದಿಲ್ಲಿ, ಆ. 7: ದಿಲ್ಲಿಯಲ್ಲಿ ನಡೆದ ಮುಸ್ಲಿಂ ವಿರೋಧಿ ಹಿಂಸಾಚಾರ ಕ್ಕೆ ಸಂಬಂಧಿಸಿ ಮಾನವ ಹಕ್ಕುಗಳ ಹೋರಾಟಗಾರ, ಜನಪ್ರಿಯ ಲೇಖಕ ಪ್ರೊ. ಅಪೂರ್ವಾನಂದ ಅವರನ್ನು ಪೊಲೀಸರು ವಿಚಾರಣೆ ನಡೆಸಿರುವುದು ಹಾಗೂ ಮೊಬೈಲ್ ವಶಪಡಿಸಿಕೊಂಡಿರುವುದನ್ನು ಖಂಡಿಸಿ ದೇಶಾದ್ಯಂತದ ಸುಮಾರು 1,350 ಸಾಮಾಜಿಕ ಹೋರಾಟಗಾರರು, ಶಿಕ್ಷಣ ತಜ್ಞರು, ಮಾಜಿ ಅಧಿಕಾರಿಗಳು ಹಾಗೂ ಹಾಗೂ ನಾಗರಿಕರ ಸಂಘಟನೆಗಳು ಸದಸ್ಯರು ಗುರುವಾರ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
ಪ್ರಜಾಪಭುತ್ವದಲ್ಲಿ ಮೂಗು ತೂರಿಸುವ ಪ್ರಯತ್ನದ ವಿರುದ್ಧ ಒಂದು ವೇಳೆ ನಾಗರಿಕರು ಧ್ವನಿ ಎತ್ತದೇ ಇದ್ದರೆ, ನಾಳೆ ಪ್ರಜಾಪ್ರಭುತ್ವ ಉಳಿಯದು ಎಂದು ಅವರು ಎಚ್ಚರಿಸಿದ್ದಾರೆ. ಎಲ್ಲ ಭಿನ್ನಮತವನ್ನು ಅಪರಾಧೀಕರಣಗೊಳಿಸುವ ಮೂಲಕ ದೇಶವು ಪೊಲೀಸ್ ರಾಜ್ಯವಾಗಿ ಪರಿವರ್ತಿತವಾಗುತ್ತಿದೆ ಎಂದು ಎಂದು ಅವರು ಎಚ್ಚರಿಸಿದ್ದಾರೆ.
ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ, ಸಾಮಾಜಿಕ ಹೋರಾಟಗಾರ್ತಿ ಅರುಣಾ ರಾಯ್, ಪ್ರೊ. ಅಮಿತ್ ಭಾದುರಿ, ಯೋಜನಾ ಆಯೋಗದ ಮಾಜಿ ಸದಸ್ಯ ಸಯ್ಯದ್ ಹಮೀದ್, ಮಾಜಿ ನಾಗರಿಕ ಸೇವಾ ಅಧಿಕಾರಿ ಎಂ.ಜಿ. ದೇವಶ್ಯಾನಂದ ಹಾಗೂ ಲೇಖಕ ರಾಮಚಂದ್ರ ಗುಹಾ ಈ ಹೇಳಿಕೆಗೆ ಸಹಿ ಹಾಕಿದ್ದಾರೆ.
ದಿಲ್ಲಿ ಪೊಲೀಸರ ವಿಶೇಷ ಘಟಕ ದಿಲ್ಲಿ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕ ಜನಪ್ರಿಯ ಲೇಖಕ ಹಾಗೂ ಭಾಷಣಕಾರ ಪ್ರೊ. ಅಪೂರ್ವಾನಂದ ಅವರನ್ನು 2020 ಆಗಸ್ಟ್ 3ರಂದು ಬರ ಮಾಡಿಕೊಂಡಿತ್ತು. ಅನಂತರ ಈಶಾನ್ಯ ದಿಲ್ಲಿಯಲ್ಲಿ ನಡೆದ ಗಲಭೆ ಬಗ್ಗೆ 5 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಅವರ ಮೊಬೈಲ್ ಅನ್ನು ವಶಪಡಿಸಿಕೊಂಡಿತ್ತು ಎಂದು ಹೇಳಿಕೆಯಲ್ಲಿ ಅವರು ಉಲ್ಲೇಖಿಸಿದ್ದಾರೆ.