ಪ್ರಣವ್ ಮುಖರ್ಜಿಗೆ ವೆಂಟಿಲೇಟರ್ ಬೆಂಬಲ ವ್ಯವಸ್ಥೆ
ಹೊಸದಿಲ್ಲಿ, ಆ.11: ಕೋವಿಡ್-19 ಸೋಂಕು ತಗುಲಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಲಾಗಿದೆ.
ಶಸ್ತ್ರಚಿಕಿತ್ಸೆ ನಂತರದ ಕೆಲ ಗಂಟೆಗಳು ತೀರಾ ಪ್ರಮುಖವಾಗಿದ್ದರಿಂದ ವೆಂಟಿಲೇಟರ್ ಬೆಂಬಲ ವ್ಯವಸ್ಥೆ ಕಲ್ಪಿಸಲಾಗಿದೆ. ಅವರಿಗೆ ಕೋವಿಡ್ ಸೋಂಕು ಇಲ್ಲದಿದ್ದರೆ ಇದು ಅಗತ್ಯವಿರಲಿಲ್ಲ ಎಂದು ಸೇನಾ (ಸಂಶೋಧನೆ ಮತ್ತು ರೆಫರಲ್) ಆಸ್ಪತ್ರೆಯ ಮೂಲಗಳು ಹೇಳಿವೆ.
ಇಂದು ಬೇರೆ ಕಾರಣಕ್ಕೆ ಆಸ್ಪತ್ರೆಗೆ ಭೇಟಿ ನೀಡಿದಾಗ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್-19 ಪಾಸಿಟಿವ್ ಬಂದಿರುವುದಾಗಿ ಮುಖರ್ಜಿ (84) ಸೋಮವಾರ ಟ್ವೀಟ್ ಮಾಡಿದ್ದರು. ಕಳೆದ ಒಂದು ವಾರದಲ್ಲಿ ನನ್ನ ಸಂಪರ್ಕದಲ್ಲಿದ್ದವರು ಸ್ವಯಂ ಐಸೊಲೇಶನ್ಗೆ ಒಳಪಡುವ ಜತೆಗೆ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಿ ಎಂದು 2012ರಿಂದ ಐದು ವರ್ಷ ಅವಧಿಗೆ ದೇಶದ ರಾಷ್ಟ್ರಪತಿಯಾಗಿದ್ದ ಅವರು ಟ್ವೀಟ್ ಮಾಡಿದ್ದರು.
ಮಾಜಿ ರಾಷ್ಟ್ರಪತಿಯವರ ದೇಹಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದನ್ನು ತೆಗೆಯಲು ನಡೆಸಿದ ಶಸ್ತ್ರಚಿಕಿತ್ಸೆ ವೇಳೆ ವೆಂಟಿಲೇಟರ್ನಲ್ಲಿ ಇಡಲಾಗಿದೆ. ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮುಗಿದ ಬಳಿಕ ವೆಂಟಿಲೇಟರ್ ತೆಗೆಯಲಾಗುತ್ತದೆ. ಆದರೆ ಅವರ ಕೋವಿಡ್-19 ಸೋಂಕಿನಿಂದಾಗಿ ವೈದ್ಯರು ಹಾಗೆ ಮಾಡಲು ಸಾಧ್ಯವಾಗಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಈ ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮುಖರ್ಜಿಯವರ ಆರೋಗ್ಯಸ್ಥಿತಿ ವಿಚಾರಿಸಿದರು. ಸುಮಾರು 20 ನಿಮಿಷಗಳ ಕಾಲ ಅವರು ಆಸ್ಪತ್ರೆಯಲ್ಲಿದ್ದರು. ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಮತ್ತು ಹಲವು ಮಂದಿ ಪಕ್ಷದ ಸಹೋದ್ಯೋಗಿಗಳು ಮುಖರ್ಜಿಯವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸಿದ್ದಾರೆ.