ಭಾರೀ ಆಕ್ರೋಶದ ಬಳಿಕ ದಿಲ್ಲಿ ಹಿಂಸಾಚಾರ ಕುರಿತ ಕೃತಿ ಪ್ರಕಾಶನದಿಂದ ಹಿಂದೆ ಸರಿದ ‘ಬ್ಲೂಮ್ಸ್ ಬರಿ’ ಇಂಡಿಯಾ
ಪುಸ್ತಕ ಬಿಡುಗಡೆಗೆ ಕಪಿಲ್ ಮಿಶ್ರಾರನ್ನು ಆಹ್ವಾನಿಸಿದ್ದ ಲೇಖಕಿಯರು
ಹೊಸದಿಲ್ಲಿ: ಖ್ಯಾತ ಪ್ರಕಾಶನ ಸಂಸ್ಥೆ ‘ಬ್ಲೂಮ್ಸ್ ಬರಿ’ ಇಂಡಿಯಾ ತನ್ನ ಹೊಸ ಪುಸ್ತಕ ‘ಡೆಲ್ಲಿ ರಯಟ್ಸ್ 2020 : ದಿ ಅನ್ ಟೋಲ್ಡ್ ಸ್ಟೋರಿ' ಪ್ರಕಟಣೆಯಿಂದ ಹಿಂದೆ ಸರಿದಿದೆ. ವಕೀಲೆ ಮೋನಿಕಾ ಅರೋರಾ, ಸೋನಾಲಿ ಚಿತಲ್ಕರ್ ಹಾಗೂ ಪ್ರೇರಣಾ ಮಲ್ಹೋತ್ರ ಈ ಕೃತಿಯ ಲೇಖಕಿಯರಾಗಿದ್ದಾರೆ.
ಈ ಕೃತಿಯ ಬಿಡುಗಡೆಯನ್ನು ಬ್ಲೂಮ್ಸ್ ಬರಿ ಇಂಡಿಯಾ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ಯೋಜಿಸಿತ್ತು. ರಾಜಧಾನಿಯಲ್ಲಿ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಗಳು ಕುರಿತಂತೆ ಈ ಕೃತಿಯನ್ನು ಲೇಖಕಿಯರು ನಡೆಸಿದ ತನಿಖೆ ಹಾಗೂ ಸಂದರ್ಶನಗಳ ಆಧಾರದಲ್ಲಿ ಸಿದ್ಧಪಡಿಸಲಾಗಿತ್ತು. ಆದರೆ ಕೃತಿಯ ಅಧಿಕೃತ ಬಿಡುಗಡೆಗೂ ಮುನ್ನ ಲೇಖಕಿಯರು ವರ್ಚುವಲ್ ಪ್ರಕಟಣಾಪೂರ್ವ ಬಿಡುಗಡೆ ಸಮಾರಂಭವನ್ನು ಬ್ಲೂಮ್ಸ್ ಬರಿ ಇಂಡಿಯಾ ಗಮನಕ್ಕೆ ತಾರದೆ ನಡೆಸಿದ್ದೇ ಅಲ್ಲದೆ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಓಪಿಇಂಡಿಯಾ ಸಂಪಾದಕಿ ನೂಪುರ್ ಜೆ ಶರ್ಮ ಅವರನ್ನು ಆಹ್ವಾನಿಸಿರುವುದು ಬ್ಲೂಮ್ಸ್ಬರಿ ಸಂಸ್ಥೆಗೆ ಸರಿ ಕಂಡಿಲ್ಲ.
ಮೇಲಾಗಿ ಈ ವಿಚಾರದಲ್ಲಿ ಅದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೂ ಗುರಿಯಾದ ಹಿನ್ನೆಲೆಯಲ್ಲಿ ಸಂಸ್ಥೆ ಈ ಕೃತಿ ಪ್ರಕಾಶನದಿಂದ ಹಿಂದೆ ಸರಿದಿದೆ. ಪುಸ್ತಕ ಬಿಡುಗಡೆಗೆ ಬಿಜೆಪಿ ನಾಯಕ ಕಪಿಲ್ ಮಿಶ್ರಾರನ್ನು ಆಹ್ವಾನಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ನಂತರ ಸಂಸ್ಥೆ ಈ ಕ್ರಮ ಕೈಗೊಂಡಿದೆ.