ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಮರಳಿ ಸ್ಥಾಪಿಸಲು ಒಟ್ಟಾಗಿ ಹೋರಾಟ: ರಾಜ್ಯದ ರಾಜಕೀಯ ಪಕ್ಷಗಳ ಪ್ರತಿಜ್ಞೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಒಂದು ವರ್ಷದ ನಂತರ ಈ ಎರಡೂ ಕೇಂದ್ರಾಡಳಿತ ಪ್ರದೇಶಗಳ ರಾಜಕೀಯ ಪಕ್ಷಗಳು ರಾಜಕೀಯ ವೈಷಮ್ಯವನ್ನು ಬದಿಗಿಟ್ಟು ಮಾತುಕತೆ ನಡೆಸಿದೆ.
2019ರ ಆಗಸ್ಟ್ 5ರಂದು ಕೇಂದ್ರ ಕೈಗೊಂಡ ನಿರ್ಧಾರದಿಂದ ಜಮ್ಮು ಮತ್ತು ಕಾಶ್ಮೀರ ಹಾಗು ದಿಲ್ಲಿಯ ನಡುವಿನ ಸಂಬಂಧದಲ್ಲಿ ಬದಲಾವಣೆಯಾಗಿದೆ ಎಂದು ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ, ಪೀಪಲ್ಸ್ ಕಾನ್ಫರೆನ್ಸ್, ಸಿಪಿಎಂ, ಕಾಂಗ್ರೆಸ್ ಮತ್ತು ಅವಾವಿ ನ್ಯಾಶನಲ್ ಕಾಂಗ್ರೆಸ್ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. 370ನೆ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಮರಳಿ ಸ್ಥಾಪಿಸಲು ಒಟ್ಟಾಗಿ ಹೋರಾಟ ಮಾಡುವುದಾಗಿ ಪ್ರತಿಜ್ಞೆಗೈದಿವೆ.
ಆದರೆ ಈ ನಡುವೆ ಕಾಂಗ್ರೆಸ್ ಮತ್ತೊಂದು ನಿಲುವನ್ನೂ ತಿಳಿಸಿದೆ. “ನಾವು ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರಳಿ ನೀಡುವ ಪರ ಇದ್ದೇವೆ. ಆದರೆ 370ನೆ ವಿಧಿ ರದ್ದತಿ ಬಗ್ಗೆ ಯಾವುದೇ ರಾಜಕೀಯ ಮಾತುಕತೆಗಳ ಬದಲು ನಾವು ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯಬೇಕು” ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿ.ಎ. ಮೀರ್ ಹೇಳಿದ್ದಾರೆ.