ಚೀನಾ ಜೊತೆ ಮಾತುಕತೆ ವಿಫಲವಾದರೆ ಮಿಲಿಟರಿ ಆಯ್ಕೆ ನಮಗಿದೆ : ಜ. ಬಿಪಿನ್ ರಾವತ್
ಹೊಸದಿಲ್ಲಿ, ಆ.24: ಗಡಿ ಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆ ಶಮನಗೊಳಿಸುವ ನಿಟ್ಟಿನಲ್ಲಿ ಭಾರತ- ಚೀನಾದ ಮಧ್ಯೆ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆ ವಿಫಲವಾದರೆ ಮಿಲಿಟರಿ ಆಯ್ಕೆ ನಮ್ಮೆದುರಿಗಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜ. ಬಿಪಿನ್ ರಾವತ್ ಹೇಳಿದ್ದು, ಈ ಮೂಲಕ ಮಿಲಿಟರಿ ಕಾರ್ಯಾಚರಣೆಗೂ ಭಾರತ ಸಿದ್ಧ ಎಂಬ ಸಂದೇಶ ನೀಡಿದ್ದಾರೆ.
ಗಡಿರೇಖೆಯ ಕುರಿತ ವಿಭಿನ್ನ ಗ್ರಹಿಕೆಯಿಂದ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಗಡಿ ಉಲ್ಲಂಘನೆ ಪ್ರಕರಣ ಸಂಭವಿಸುತ್ತದೆ. ಕಣ್ಗಾವಲು, ಮೇಲ್ವಿಚಾರಣೆ ಮತ್ತು ಇಂತಹ ಉಲ್ಲಂಘನೆ ಪ್ರಕ್ರಿಯೆ ಅತಿಕ್ರಮಣದ ರೂಪು ಪಡೆಯದಂತೆ ತಡೆಯುವ ಕಾರ್ಯವನ್ನು ರಕ್ಷಣಾ ಪಡೆಗಳಿಗೆ ವಹಿಸಲಾಗಿದೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಯಥಾಸ್ಥಿತಿ ನೆಲೆಸುವಂತೆ ಮಾಡುವ ಎಲ್ಲಾ ಪ್ರಯತ್ನ ವಿಫಲವಾದರೆ ಆಗ ರಕ್ಷಣಾ ಪಡೆಗಳು ಮಿಲಿಟರಿ ಕಾರ್ಯಾಚರಣೆಗೆ ಸನ್ನದ್ಧವಾಗಿರುತ್ತವೆ . ಲಡಾಕ್ನ ಗಡಿಭಾಗದಲ್ಲಿ ಚೀನಾದ ಸೇನೆ ಯಥಾಸ್ಥಿತಿ ಕಾಯ್ದುಕೊಳ್ಳಲು ಬದ್ಧವಾಗಿದೆ ಎಂದು ಖಾತರಿಪಡಿಸುವ ನಿಟ್ಟಿನಲ್ಲಿ ಎಲ್ಲಾ ಆಯ್ಕೆಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ , ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಇತರರು ಪರಿಶೀಲಿಸುತ್ತಿದ್ದಾರೆ ಎಂದು ರಾವತ್ ಹೇಳಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ದೇಶದ ವಿವಿಧ ಗುಪ್ತಚರ ಏಜೆನ್ಸಿಗಳ ಮಧ್ಯೆ ಸಮನ್ವಯತೆಯ ಕೊರತೆಯಿದೆ ಎಂಬ ವರದಿಯನ್ನು ನಿರಾಕರಿಸಿದ ರಾವತ್, ಮಾಹಿತಿ ಸಂಗ್ರಹ ಮತ್ತು ಪೂರೈಕೆಯ ಜವಾಬ್ದಾರಿ ಹೊಂದಿರುವ ಎಲ್ಲಾ ಏಜೆನ್ಸಿಗಳ ಮಧ್ಯೆ ದಿನಂಪ್ರತಿ ಸಭೆ ನಡೆಯುತ್ತಿದೆ. ಸರಕಾರದ ಹಿರಿಯ ಸಚಿವರು ಹಾಗೂ ಅಧಿಕಾರಿಗಳು ಸದಸ್ಯರಾಗಿರುವ ‘ಚೀನಾ ಸ್ಟಡಿ ಗ್ರೂಫ್’ ಲಡಾಖ್ನ ಪರಿಸ್ಥಿತಿಯ ಪರಿಶೀಲನೆಗೆ ಪ್ರತೀ ದಿನ ಸಭೆ ನಡೆಸುತ್ತಿದೆ. ಚೀನಾದ ಸೇನೆಯ ಚಲನವಲನದ ಕುರಿತು ಮಾನವ ಮತ್ತು ತಂತ್ರಜ್ಞಾನ ಬುದ್ಧಿಮತ್ತೆಯ ಮೂಲಕ ಪಡೆದ ಮಾಹಿತಿಯನ್ನು ಭದ್ರತಾ ಏಜೆನ್ಸಿಗಳು ನಿರಂತರ ಹಂಚಿಕೊಳ್ಳುತ್ತಿವೆ ಎಂದು ಹೇಳಿದರು.
ಗಡಿ ಪ್ರದೇಶದಲ್ಲಿ ಭಾರತ ನಡೆಸುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಕಾಮಗಾರಿಯ ಸುರಕ್ಷತೆ ಬಗ್ಗೆ ನಿರಂತರ ಸಭೆ ನಡೆಸಲಾಗುತ್ತಿದೆ. ಕಳೆದ ಮೂರು- ನಾಲ್ಕು ವರ್ಷಗಳಿಂದ ಈ ಕಾಮಗಾರಿ ವೇಗ ಪಡೆದುಕೊಂಡಿದೆ ಎಂದು ಜ. ರಾವತ್ ಹೇಳಿದ್ದಾರೆ.