‘ಐಟಿ ಸೆಲ್ ನ ಅಮಿತ್ ಮಾಳವಿಯರನ್ನು ಕಿತ್ತೊಗೆಯಿರಿ, ಇಲ್ಲದಿದ್ದರೆ…’
ಬಿಜೆಪಿಗೆ ಎಚ್ಚರಿಕೆ ನೀಡಿದ ಸುಬ್ರಮಣಿಯನ್ ಸ್ವಾಮಿ
ಹೊಸದಿಲ್ಲಿ: ಬಿಜೆಪಿ ತನ್ನ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಅವರನ್ನು ಅವರ ಹುದ್ದೆಯಿಂದ ಗುರುವಾರದೊಳಗೆ ಕಿತ್ತೊಗೆಯಬೇಕು ಎಂದು ಪಕ್ಷದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಗಡುವು ವಿಧಿಸಿದ್ದಾರೆ.
ತಮ್ಮ ವಿರುದ್ಧ ಮಾಳವಿಯ ನಕಲಿ ಟ್ವೀಟ್ ಅಭಿಯಾನ ಆರಂಭಿಸಿದ್ದಾರೆಂದು ಬುಧವಾರವಷ್ಟೇ ಆರೋಪಿಸಿದ್ದ ಸ್ವಾಮಿ, ಅವರನ್ನು ಹುದ್ದೆಯಿಂದ ಕಿತ್ತೊಗೆಯುವುದು ತಾವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಮುಂದೆ ಇಟ್ಟಿರುವ ‘ರಾಜಿಪಂಚಾಯತಿ ಪ್ರಸ್ತಾಪ’ ಎಂದು ಹೇಳಿದ್ದಾರೆ.
ಮಾಳವಿಯ ಅವರನ್ನು ಹುದ್ದೆಯಿಂದ ಕೈಬಿಡದೇ ಇದ್ದರೆ ಪಕ್ಷ ತಮ್ಮನ್ನು `ಸಮರ್ಥಿಸುತ್ತಿಲ್ಲ' ಎಂದು ತಿಳಿದಂತಾಗುತ್ತದೆ ಎಂದೂ ಸ್ವಾಮಿ ಹೇಳಿದ್ದಾರೆ.
“ಬಿಜೆಪಿ ಐಟಿ ಸೆಲ್ ನಿಂದ ನಾಳೆ ಮಾಳವಿಯ ಅವರನ್ನು ತೆಗೆಯದೇ ಇದ್ದರೆ ಪಕ್ಷದ ನಾಯಕತ್ವ ನನ್ನನ್ನು ಸಮರ್ಥಿಸಲು ಇಚ್ಛಿಸಿಲ್ಲ ಎಂದು ತಿಳಿಯಬೇಕಾಗುತ್ತದೆ. ಪಕ್ಷದ ಅಭಿಪ್ರಾಯವನ್ನು ಕೇಳಲು ಯಾವುದೇ ವೇದಿಕೆಯಿಲ್ಲದೇ ಇರುವುದರಿಂದ ನನ್ನನ್ನು ನಾನೇ ಸಮರ್ಥಿಸಿಕೊಳ್ಳಬೇಕಾಗಿದೆ'' ಎಂದು ಸ್ವಾಮಿ ಬುಧವಾರ ಟ್ವೀಟ್ ಮಾಡಿದ್ದಾರೆ.