ಡಿಜಿಟಲ್ ಮಾಧ್ಯಮಗಳಿಗೆ ಮೊದಲು ನಿರ್ಬಂಧ ವಿಧಿಸಬೇಕಿದೆ: ಸುಪ್ರೀಂಗೆ ಕೇಂದ್ರದ ಅಫಿಡಾವಿಟ್
ಹೊಸದಿಲ್ಲಿ, ಸೆ.17: ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವಂತಹ ನಿರ್ಧಾರಗಳನ್ನು ಕೈಗೊಳ್ಳುವುದಾದರೆ ಕ್ಷಿಪ್ರವಾಗಿ ಮಾಹಿತಿ ತಲುಪಿಸುವ ಮತ್ತು ತಕ್ಷಣ ವೈರಲ್ ಆಗುವ ಸಾಮರ್ಥ್ಯ ಹೊಂದಿರುವ ಡಿಜಿಟಲ್ ಮಾಧ್ಯಮಗಳಿಗೆ ಮೊದಲು ನಿರ್ಬಂಧ ವಿಧಿಸಬೇಕು ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್ಗೆ ಅಫಿಡಾವಿಟ್ ಸಲ್ಲಿಸಿದೆ.
ಟಿವಿ ಚಾನೆಲ್ಗಳಿಗೆ ಮಾರ್ಗದರ್ಶಿ ಸೂತ್ರ ರೂಪಿಸುವ ಅಗತ್ಯವಿದೆ ಎಂಬ ಸುಪ್ರೀಂಕೋರ್ಟ್ನ ಸೂಚನೆಗೆ ಸಂಬಂಧಿಸಿ ಪ್ರಮಾಣಪತ್ರ ಸಲ್ಲಿಸಿರುವ ಕೇಂದ್ರ ಸರಕಾರ, ದೃಶ್ಯ ಮಾಧ್ಯಮಕ್ಕೂ ಮೊದಲು ಡಿಜಿಟಲ್ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವ ಅಗತ್ಯವಿದೆ ಎಂದು ಹೇಳಿದೆ. ಡಿಜಿಟಲ್ ಮಾಧ್ಯಮ ಜನರನ್ನು ವೇಗವಾಗಿ ತಲುಪಬಲ್ಲದು. ವಾಟ್ಸ್ಯಾಪ್, ಟ್ವಿಟರ್ , ಫೇಸ್ಬುಕ್ ಮುಂತಾದ ಆ್ಯಪ್ಗಳ ಕಾರಣ ತಕ್ಷಣ ವೈರಲ್ ಆಗುವ ಸಾಮರ್ಥ್ಯವನ್ನೂ ಹೊಂದಿದೆ. ಇಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿ ಸೂಕ್ತ ಚೌಕಟ್ಟು ಮತ್ತು ನ್ಯಾಯಾಂಗದ ತೀರ್ಪುಗಳಿವೆ. ವಾಕ್ ಸ್ವಾತಂತ್ರ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮದ ಸಮತೋಲನದ ವಿಷಯ ಈಗಾಗಲೇ ಕಾನೂನು ನಿಬಂಧನೆ ಹಾಗೂ ನ್ಯಾಯಾಲಯದ ತೀರ್ಪಿನ ಮೂಲಕ ನಿರ್ಣಯವಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದೆ.
ಪ್ರಧಾನವಾಹಿನಿಯ ಇಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಮಾತ್ರ ನಿರ್ಬಂಧ ವಿಧಿಸುವುದು ನ್ಯಾಯಸಮ್ಮತವಲ್ಲ. ಮಾಧ್ಯಮ ಕ್ಷೇತ್ರದಲ್ಲಿ ಮುಖ್ಯವಾಹಿನಿಯ ಇಲೆಕ್ಟ್ರಾನಿಕ್ ಮಾಧ್ಯಮ, ಮುಖ್ಯವಾಹಿನಿಯ ಮುದ್ರಣ ಮಾಧ್ಯಮದ ಜೊತೆಗೆ ಸಮಾನಾಂತರ ಮಾಧ್ಯಮಗಳಾದ ಡಿಜಿಟಲ್ ಪ್ರಿಂಟ್ ಮಾಧ್ಯಮ, ಡಿಜಿಟಲ್ ವೆಬ್ ಆಧಾರಿತ ಸುದ್ದಿ ಪೋರ್ಟಲ್ಗಳು, ಯೂಟ್ಯೂಬ್ ಚಾನೆಲ್ಗಳು, ಓವರ್ ದಿ ಟಾಪ್(ಒಟಿಪಿ) ಫ್ಲಾಟ್ಫಾರ್ಮ್ಗಳು ಸೇರಿವೆ. ಮಾರ್ಗದರ್ಶಿ ಸೂತ್ರಗಳ ಬಗ್ಗೆ ನಿರ್ಧರಿಸಲು ಸುಪ್ರೀಂಕೋರ್ಟ್, ಸಲಹೆಗಾರರು ಅಥವಾ ಸಮಿತಿಯ ಸಹಾಯ ಪಡೆಯಬಹುದು ಎಂದು ಕೇಂದ್ರ ಸರಕಾರ ಸಲಹೆ ನೀಡಿದೆ.
ಮುಸ್ಲಿಮರು ಸರಕಾರಿ ಸೇವೆಯೊಳಗೆ ನುಸುಳುತ್ತಿದ್ದಾರೆ ಎಂಬ ವಿಷಯದಲ್ಲಿ ಸುದರ್ಶನ್ ಟಿವಿ ಪ್ರಸಾರ ಮಾಡಲು ಉದ್ದೇಶಿಸಿದ್ದ ಕಾರ್ಯಕ್ರಮಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ವಿಧಿಸಿತ್ತು. ಈ ಪ್ರಕರಣದ ಕುರಿತು ಕೇಂದ್ರ ಸರಕಾರ ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ.