ದಿಲ್ಲಿ ಗಲಭೆ ಕುರಿತು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆಗ್ರಹ: ರಾಜಕೀಯ ಪಕ್ಷಗಳ ನಾಯಕರಿಂದ ರಾಷ್ಟ್ರಪತಿ ಭೇಟಿ
ಹೊಸದಿಲ್ಲಿ, ಸೆ. 17: ದಿಲ್ಲಿಯಲ್ಲಿ ಈ ವರ್ಷ ಫೆಬ್ರವರಿಯಲ್ಲಿ ಸಂಭವಿಸಿದ ಕೋಮು ಗಲಭೆ ಕುರಿತು ವಿಶ್ವಾಸಾರ್ಹ ಹಾಗೂ ಪಕ್ಷಪಾತ ರಹಿತ ತನಿಖೆ ನಡೆಸಲು ಮಧ್ಯಪ್ರವೇಶಿಸುವಂತೆ ಐದು ರಾಜಕೀಯ ಪಕ್ಷಗಳ ನಾಯಕರು ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ 1952ರ ತನಿಖಾ ಆಯೋಗ ಕಾಯ್ದೆ ಅಡಿಯಲ್ಲಿ ದಿಲ್ಲಿ ಗಲಭೆಯ ತನಿಖೆ ಆರಂಭಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಅವರು ರಾಷ್ಟ್ರಪತಿಯನ್ನು ಆಗ್ರಹಿಸಿದರು.
ದಿಲ್ಲಿ ಗಲಭೆಯ ತನಿಖೆ ಹಾಗೂ ಗಲಭೆಯಲ್ಲಿ ದಿಲ್ಲಿ ಪೊಲೀಸರ ಪಾತ್ರದ ಕುರಿತು ಕಳವಳ ವ್ಯಕ್ತಪಡಿಸಲು ಕಾಂಗ್ರೆಸ್ ಸಂಸದ ಅಹ್ಮದ್ ಪಟೇಲ್, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಡಿಎಂಕೆ ಸಂಸದೆ ಕನ್ನಿಮೋಳ್ ಹಾಗೂ ಆರ್ಜೆಡಿ ಸಂಸದ ಮನೋಜ್ ಜಾ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದರು.
ಬುದ್ಧಿಜೀವಿಗಳು, ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು ಹಾಗೂ ರಾಜಕೀಯ ಪಕ್ಷಗಳ ನಾಯಕರ ವಿರುದ್ಧ ದಾಖಲಿಸಲಾದ ನಕಲಿ ಪ್ರಕರಣಗಳು ಹಾಗೂ ಸುಳ್ಳು ಆರೋಪಗಳ ಬಗ್ಗೆ ಈ ನಾಯಕರು ರಾಷ್ಟ್ರಪತಿ ಅವರಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ದಿಲ್ಲಿ ಪೊಲೀಸರ ಪೂರಕ ಆರೋಪ ಪಟ್ಟಿಯಲ್ಲಿ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅಲ್ಲದೆ, ಪ್ರಾಧ್ಯಾಪಕರಾದ ಜಯತಿ ಘೋಷ್, ಅಪೂರ್ವಾನಂದ, ಚಿತ್ರನಿರ್ದೇಶಕ ರಾಹುಲ್ ರಾಯ್ ಅವರನ್ನು ಗಲಭೆಗೆ ಉತ್ತೇಜನ ನೀಡಿದ ಸಹ ಪಿತೂರಿಗಾರರು ಎಂದು ಉಲ್ಲೇಖಿಸಲಾಗಿದೆ. ರಾಷ್ಟ್ರಪತಿ ಅವರಿಗೆ ಸಲ್ಲಿಸಿದ ಜ್ಞಾಪನಾ ಪತ್ರದಲ್ಲಿ ನಿಯೋಗ ಹಿಂಸಾಚಾರದ ಸಂದರ್ಭ
ದಿಲ್ಲಿ ಪೊಲೀಸರ ಪಾತ್ರ ಹಾಗೂ ಸಿಎಎ/ಎನ್ಆರ್ಸಿ/ಎನ್ಪಿಆರ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಾಮಾಜಿಕ ಹೋರಾಟಗಾರರು ಹಾಗೂ ಯುವಜನರನ್ನು ದಿಲ್ಲಿ ಹಿಂಸಾಚಾರದ ಪಿತೂರಿಗಾರರು ಎಂದು ತಪ್ಪಾಗಿ ಸಿಲುಕಿಸುವ ಹಾಗೂ ಕಿರುಕುಳ ನೀಡುವ ಪ್ರಯತ್ನ ಕಳವಳಕಾರಿ ಎಂದು ಹೇಳಿದೆ. ಗಲಭೆಯಲ್ಲಿ ತನ್ನ ಸಿಬ್ಬಂದಿ ಹಾಗೂ ಬಿಜೆಪಿ ನಾಯಕರ ಪಾತ್ರದ ಬಗ್ಗೆ ದಿಲ್ಲಿ ಪೊಲೀಸರು ಜಾಣ ಕುರುಡು ಪ್ರದರ್ಶಿದ್ದಾರೆ. ಅದೇ ಸಂದರ್ಭ ಪೌರತ್ವ ತಿದ್ದುಪಡಿ ಕಾಯ್ದೆ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದವರನ್ನು ಅಪರಾಧಿಗಳನ್ನಾಗಿ ಮಾಡುವ ವಿಚಾರಣೆಯ ಮಾರ್ಗವನ್ನು ಅನುಸರಿಸಿದಂತೆ ಹಾಗೂ ದಿಲ್ಲಿ ಗಲಭೆಗೆ ಕಾರಣವಾದ ಪಿತೂರಿಗಾರರು ಎಂದು ಚಿತ್ರಿಸಲು ಪ್ರಯತ್ನಿಸಿದಂತೆ ತನಿಖೆ ಕಂಡು ಬರುತ್ತಿದೆ ಎಂದು ಜ್ಞಾಪನಾ ಪತ್ರ ಹೇಳಿದೆ.