ಚೀನಾದೊಂದಿಗೆ ಮಾತುಕತೆ ಸಾಧ್ಯವಾದರೆ ಇತರ ನೆರೆದೇಶಗಳೊಂದಿಗೆ ಯಾಕಾಗದು: ಫಾರೂಕ್ ಅಬ್ದುಲ್ಲಾ ಪ್ರಶ್ನೆ
ಹೊಸದಿಲ್ಲಿ, ಸೆ.20: ಬಂಧನದಿಂದ ಬಿಡುಗಡೆಗೊಂಡ ಬಳಿಕ ಪ್ರಪ್ರಥಮ ಬಾರಿಗೆ ಸಂಸತ್ನಲ್ಲಿ ಮಾತನಾಡಿರುವ ಎನ್ಸಿಪಿ ಅಧ್ಯಕ್ಷ, ಸಂಸದ ಫಾರೂಕ್ ಅಬ್ದುಲ್ಲಾ, ಗಡಿಯಲ್ಲಿನ ಉದ್ವಿಗ್ನತೆ ಶಮನಗೊಳಿಸಲು ಚೀನಾದೊಂದಿಗೆ ಮಾತುಕತೆ ಸಾಧ್ಯವಾಗುವುದಾದರೆ, ಇತರ ನೆರೆದೇಶಗಳೊಂದಿಗೆ ಯಾಕಾಗದು ಎಂದು ಪ್ರಶ್ನಿಸಿದ್ದಾರೆ.
ಗಡಿಯಲ್ಲಿ ಘರ್ಷಣೆ, ಚಕಮಕಿ ಹೆಚ್ಚುತ್ತಿದ್ದು ಜನತೆ ಸಾಯುತ್ತಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಮಾರ್ಗ ಹುಡುಕಬೇಕಿದೆ. ಲಡಾಕ್ ಗಡಿಭಾಗದ ಪರಿಸ್ಥಿತಿ ಸುಧಾರಣೆಗೆ ಚೀನಾದೊಂದಿಗೆ ಸರಕಾರ ಮಾತುಕತೆ ನಡೆಸುತ್ತಿದೆ. ಇತರ ನೆರೆದೇಶಗಳೊಂದಿಗೂ ಮಾತುಕತೆ ನಡೆಸುವ ಮೂಲಕ ಜಮ್ಮು ಕಾಶ್ಮೀರ ಗಡಿಭಾಗದಲ್ಲಿರುವ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸಬೇಕು ಎಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅಬ್ದುಲ್ಲಾ ಹೇಳಿದರು.
ಶೋಫಿಯಾನ್ ಎನ್ಕೌಂಟರ್ನಲ್ಲಿ ತಪ್ಪು ತಿಳುವಳಿಕೆಯಿಂದ ಮೂವರನ್ನು ಹತ್ಯೆ ಮಾಡಿರುವುದನ್ನು ಸೇನೆ ಒಪ್ಪಿಕೊಂಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅಬ್ದುಲ್ಲಾ, ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ. 4ಜಿ ಇಂಟರ್ನೆಟ್ ಸಂಪರ್ಕ ಸ್ಥಗಿತದಿಂದ ವ್ಯಾಪಾರಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಹೇಳಿದರು.