ಶಿವಸೇನೆ, ಅಕಾಲಿದಳ ಇಲ್ಲದೆ ಎನ್ಡಿಎ ಇಲ್ಲ: ಸಂಜಯ್ ರಾವತ್
ಹೊಸದಿಲ್ಲಿ, ಸೆ. 27: ಮೂರು ಕೃಷಿ ವಿಧೇಯಕ ಕುರಿತ ಭಿನ್ನಾಭಿಪ್ರಾಯವನ್ನು ಉಲ್ಲೇಖಿಸಿ ಶಿರೋಮಣಿ ಅಕಾಲಿ ದಳ (ಎಸ್ಡಿಎ)ಎನ್ಡಿಎಯಿಂದ ಹೊರಬಿದ್ದ ಬಳಿಕ ಶಿವಸೇನೆ ನಾಯಕ ಸಂಜಯ್ ರಾವತ್ ರವಿವಾರ ಬಿಜೆಪಿ ನೇತೃತ್ವದ ಎನ್ಡಿಎಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಸಂಸತ್ತಿನಲ್ಲಿ ಇತ್ತೀಚೆಗೆ ಅಂಗೀಕರಿಸಲಾದ ಮೂರು ಕೃಷಿ ವಿಧೇಯಕ ಕುರಿತಂತೆ ಪಂಜಾಬ್ನಲ್ಲಿ ರೈತರು ಚಳುವಳಿ ಆರಂಭಿಸಿರುವ ನಡುವೆ ಶಿರೋಮಣಿ ಅಕಾಲಿ ದಳದ ವರಿಷ್ಠ ಸುಖ್ಬೀರ್ ಸಿಂಗ್ ಬಾದಲ್ ಎನ್ಡಿಎಯೊಂದಿಗೆ ಮೈತ್ರಿ ಕಡಿದುಕೊಂಡಿರುವುದಾಗಿ ಶನಿವಾರ ರಾತ್ರಿ ಘೋಷಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಜಯ್ ರಾವತ್, ‘‘ಎನ್ಡಿಎಯ ಸುದೃಢ ಕಂಬಗಳು’’ ಶಿವಸೇನೆ ಹಾಗೂ ಶಿರೋಮಣಿ ಅಕಾಲಿ ದಳ. ಇವೆರಡು ಪಕ್ಷಗಳು ಇಲ್ಲದೆ ಎನ್ಡಿಎಗೆ ಅಸ್ತಿತ್ವ ಇಲ್ಲ ಎಂದಿದ್ದಾರೆ.
‘‘ಎನ್ಡಿಎಯ ಸುದೃಢ ಕಂಬಗಳು ಶಿವಸೇನೆ ಹಾಗೂ ಶಿರೋಮಣಿ ಅಕಾಲಿ ದಳ. ಎನ್ಡಿಎಯಿಂದ ಶಿವಸೇನೆ ಬಲವಂತವಾಗಿ ನಿರ್ಗಮಿಸಬೇಕಾಯಿತು. ಈಗ ಶಿರೋಮಣಿ ಅಕಾಲಿ ದಳ ಎನ್ಡಿಎಯ ಮೈತ್ರಿ ಕಡಿದುಕೊಂಡಿದೆ. ಎನ್ಡಿಎಗೆ ಹೊಸ ಮಿತ್ರ ಪಕ್ಷಗಳು ಸಿಗಬಹುದು. ಶುಭವಾಗಲಿ. ಶಿವಸೇನೆ ಹಾಗೂ ಶಿರೋಮಣಿ ಅಕಾಲಿ ದಳ ಇಲ್ಲದ ಮೈತ್ರಿಯನ್ನು ಎನ್ಡಿಎ ಎಂದು ಪರಿಗಣಿಸಲು ಸಾಧ್ಯವಿಲ್ಲ’’ ಎಂದು ಸಂಜಯ್ ರಾವತ್ ಹೇಳಿದ್ದಾರೆ.